Tuesday, July 7, 2020

ಬೆಂಗಳೂರು ಮತ್ತು ಜನರ ವಲಸೆ

ಈ ಒಂದು ವಾರದ ಹೊಸ ಬೆಳವಣಿಗೆ ಬೆಂಗಳೂರು ವಾಸಕ್ಕೆ ಯೋಗ್ಯವಿಲ್ಲ ಅಂತ ತಮ್ಮೂರಿಗೆ ಹೊರಟ ಜನರ ವಿಚಾರ ಚರ್ಚೆ ಆಗ್ತಿದೆ.  ನಮ್ಮದೂ ಮೂಲ ಊರು ವಿಜಾಪುರವೇ ಆದರೂ ನನ್ನೂರು ಬೆಂಗಳೂರೇ ನಾನು ಹುಟ್ಟಿ ಬೆಳೆದ ನನ್ನ ಜೀವನ ರೂಪಿಸಿ ಕೊಂಡ ನನ್ನ ಮನೆ.  ಯಾವುದೇ ಊರನ್ನು ನಾವು ಬಳಕೆಗೆ ಅವಕಾಶಕ್ಕೆ ಸೇರಿದಾಗ ಮತ್ತೊಂದು ಹುಡುಕೋದು ಸಹಜ.  ಈಗ ಬೆಂಗಳೂರು ಬಿಟ್ಟು ಹೋದವರು ತಮ್ಮ ಸ್ವಂತ ಊರನ್ನು ಬಿಟ್ಟು ಬರುವಾಗ ಬೆಂಗಳೂರು ಒಂದು ಆಯ್ಕೆ ಎಂದು ಬಂದವರು ಅಷ್ಟೆ.  ಬಹಳ ಜನ ಊರು ಬಿಟ್ಟು ಬೇರೆ ಊರಿಗೆ ಸೇರುವಾಗ ಕೆಲವು  ಜನರಿಗೆ ತೊಂದರೆ ಆಗೋದು ಸಹಜ.  ಆದರೂ ಪರಿಸ್ಥಿತಿ ಬದಲಾವಣೆ ಎಲ್ಲರಿಗೂ ಅನಿವಾರ್ಯ.  ಸಾವಿಗೆ ಹೆದರಿ ಊರು ಬಿಟ್ಟವರು ಸಾವು ಎಲ್ಲೂ ತಮ್ಮ ಬೆನ್ನು ಬಿಡುವುದಿಲ್ಲ ಎಂಬ ಸತ್ಯವನ್ನು ಅರಿತಿರುವುದಿಲ್ಲ. 
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್‌ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು.  ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ.  ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು  ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ

ವಿಷಯ :- ಹೆತ್ತವರ ಮುಪ್ಪಿನಲ್ಲಿ ಮಕ್ಕಳ ಕರ್ತವ್ಯ


ಈಗಿನ ಕಾಲದಲ್ಲಿ ಬಹಳ ಸೂಕ್ಷ್ಮ ವಿಷಯ. ಮೊದಲೆಲ್ಲಾ ತಂದೆ ತಾಯಿಯರನ್ನು ಬಿಟ್ಟು ಇರುವ ಕಲ್ಪನೆ ಇರಲೇ ಇಲ್ಲ. ತಂದೆ ತಾಯಿಯರ ಒಡನಾಟ ಸಾನಿಧ್ಯ ಇದು ಸಣ್ಣ ಮಕ್ಕಳಾದಾಗ ನಮ್ಮ ಅವಶ್ಯಕತೆ ಇರುವ ಹಾಗೆ ವಯಸ್ಸಾದ ಮೇಲೆ ಅವರನ್ನು ನೋಡಿ ಕೊಳ್ಳುವುದು ಅವರ ಊಟ ಬಟ್ಟೆ ಅಷ್ಟೆ ಅಲ್ಲ ಅವರ ಎಲ್ಲ ಬೇಕು ಬೇಡಗಳನ್ನು ನೋಡಿ ಕೊಳ್ಳುವುದು ಸದಾ ಅವರಿಗೆ ಒಂಟಿಯಾಗಿರಲು ಬಿಡದೇ ನೋಡಿ ಕೊಳ್ಳುವುದು ಯುವ ಜನರ ಕರ್ತವ್ಯವಾಗಿದೆ.
ನಾವು ಹುಟ್ಟಿದಾಗಿನಿಂದ ನಮ್ಮ ಬೇಕು ಬೇಡಗಳನ್ನು ನಾವು ಕೇಳುವ ಮೊದಲೇ ಒದಗಿಸಿದ ಅವರಿಗೆ ಅವರ ವಯಸ್ಸಾದ ಕಾಲದಲ್ಲಿ ಅವರ ಅವಶ್ಯಕತೆ ಅನುಕೂಲತೆಯ ವಿಚಾರ ಮಾಡಿ ನಮ್ಮ ಬದುಕಿನಲ್ಲಿ ಸಣ್ಣ ಮಾರ್ಪಾಡು ಮಾಡಿಕೊಳ್ಳುವುದರಲ್ಲಿ ಯಾವ ದೊಡ್ಡ ಉಪಕಾರದ ಕೆಲಸವಾಗಿರುವುದಿಲ್ಲ. ಅದು ನಮ್ಮ ಕರ್ತವ್ಯವಾಗಿರುತ್ತದೆ.  ಈಗಿನ ಕಾಲದ ಹೊಸ ಹೊಸ ತಂತ್ರಜ್ಞಾನ ಅಥವಾ ಪದ್ಧತಿಗಳಿಗೆ ಅವರು ಒಗ್ಗಿಕೊಂಡಿಲ್ಲವೆಂದರೆ ಅವರು ದಡ್ಡರೆಂದಲ್ಲ ಅವರು ಸಂಪೂರ್ಣ ಚಟುವಟಿಕೆಯಿಂದ ಇರುವಾಗ ಇತ್ತೀಚಿನ ತಂತ್ರಜ್ಞಾನಗಳ ಅವಿಷ್ಕಾರವಾಗಿದ್ದಲ್ಲಿ ಅವರು ನಮಗಿಂತ ಹೆಚ್ಚು ಸಮಂಜಸವಾಗಿ ಬಳಸುತ್ತಿದ್ದರು. ನಮ್ಮ ಹೆತ್ತವರು ವಯಸ್ಸಾದ ಮೇಲೆ ನಮ್ಮ ಮಕ್ಕಳು ಮತ್ತು ಹೆತ್ತವರು ಇಬ್ಬರನ್ನೂ ಸಮ ಭಾವದಿಂದ ನೋಡಿಕೊಳ್ಳಬೇಕು.
ಮಕ್ಕಳಿಗೆ ತೋರಿಸುವಷ್ಟೇ ಪ್ರೀತಿ ವಿಶ್ವಾಸ ಮತ್ತು ಕಾಳಜಿಯನ್ನು ವೃದ್ಧ ತಂದೆ ತಾತಿಯರಿಗೂ ತೋರಿಸಬೇಕು. ವ್ಯತ್ಯಾಸ ಇಷ್ಟೆ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ತಾಡಿಸಬಹುದು ಆದರೆ ಹೆತ್ತವರಿಗೆ ತಿಳಿಸಿ ಹೇಳಬೇಕು.  ಇನ್ನೊಂದು ಮುಖ್ಯವಾಗಿ ಹೆತ್ತವರಿಗೆ ತೋರಿಸಬೇಕಾದದ್ದು ಗೌರವವನ್ನು, ಇಂದಿನ ಯುವ ಸಮಾಜದಲ್ಲಿ ತಂದೆ ತಾಯಿಯರ ಬಗೆಗೆ ಅಸಡ್ಡೆ ಬಹಳವಾಗುತ್ತಿದೆ. ಕಟ್ಟ ಕಡೆಯ ಸತ್ಯವೆಂದರೆ  ನಾವು ಕೂಸಾಗಿದ್ದಾಗಿನಿಂದ ನಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡಿದ ಆ ಪೂಜ್ಯರನ್ನು ಮಕ್ಕಳಂತೆ ಲಾಲಿಸಿ, ಪ್ರೀತಿಸಿ ನಡೆದಾಡುವ ದೇವರಂತೆ ಪೂಜಿಸಿದಾಗ ನಮ್ಮ ಕರ್ತವ್ಯವನ್ನು ನಾವು ಮಾಡಿದಂತೆ. 
ಜೀವಂತ ಇರುವಾಗ ಅವರ ಬಗ್ಗೆ ಅಸಡ್ಡೆ ತೋರುವುದು, ದೂಷಿಸುವುದು, ಅವಮಾನ ಮಾಡುವುದು ಅವರ ಮನಸ್ಸಿಗೆ ನೋಯಿಸಿ ನಂತರ ಶ್ರಾದ್ಧಾದಿಗಳನ್ನು ಮಾಡಿ ದಾನ ಧರ್ಮಗಳನ್ನು ಮಾಡಿ ದೊಡ್ಡ ದೊಡ್ಡ ಭಾವಚಿತ್ರ ಇಟ್ಟು ಹಾರ ಹಾಕುವುದಕ್ಕಿಂತ ಇದ್ದಾಗ ಪ್ರೀತಿಸಿ, ಪೂಜಿಸಿ, ಲಾಲಿಸಿ ಅವರ ಪ್ರೀತಿ ಪಾತ್ರರಾಗುವುದು ಯುವ ಜನರ ಕರ್ತವ್ಯ