Sunday, May 17, 2020


ವಿಧಿಪಿತ ನೋನಲ್ಲದೆ ನಿಧಿಪತಿಗಳು ಉಂಟೆ|
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ|
ಮಧುಸೂದನ ಜಗನ್ನಾಥವಿಠ್ಠಲರೇಯ |
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ || 2 ||

ಬ್ರಹ್ಮಾದಿ ದೇವತೆಗಳಿಗೆ ತಂದೆಯಾದ ನಿನ್ನಷ್ಟು ದೊಡ್ಡ ನಿಧಿಪತಿಯು ಬೇರೆಯಾರಿದ್ದಾರೆ? ನಿನ್ನ ನಂಬಿ ಬಂದಂತಹ ಭಕ್ತರಿಗೆ ಸದಾ ಧನೌಂತನಾಗಿದ್ದು ಸಂಪತ್ಪ್ರದಾಯಕ ನಾಗಿರುವ ನೀನು, ನಿನ್ನನ್ನು ದ್ವೇಷಿಸುವ ಶತೃಗಳಿಗೆ  ಮರಣ ಸದೃಶವಾಗಿರುವೆ.

ನರಸಿಂಹ ಸುಳಾದಿ


ದುರಿತವನ ಕುಠಾರಿ ದುರ್ಜನ ಕುಲವೈರಿ|
ಶರಣಾಗತ ವಜ್ರ ಪಂಜರ ಕುಂಜರ-1|
ವರ ಸಂರಕ್ಷಕ ಜನ್ಮಮರಣ ರಹಿತ ಮಹಿತ|
ಪರಮ ಕರುಣಾ ಸಿಂಧು ಭಕ್ತ ಬಂದು|
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖ ಪೂರ್ಣ|
ಉರುಗಾಯ ವೈಕುಂಠವರ ಮಂದಿರ ಚಂದಿರ|
ಹರಿಯೆ ಕ್ಷರಾಕ್ಷರ ಪುರುಷೋತ್ತಮ|
ತರಣಿಕೋಟಿ ಸಂಕಾಶ ವಿಮಲಕೇಶ|
ಧುರಗದೊಳಗರ್ಜುನನ ತುರಗ ನಡೆಸಿದ ಸಂ-|
ಗರ ಭಯಂಕರ ಲೋಕೈಕಧೀರ|
ನರಸಿಂಹ ನಿನ್ನ ಪಾದಕೆರಗಿ ಬೇಡಕೊಂಬೆ|
ಮೊರೆ ಹೊಕದಾಸಗೆ ಬಂದ ಭಯವ |
ಪರಿಹಸಿರಿ ಸೌಖ್ಯವ ಕರುಣಿಸು ದಯದಿಂದ|
ಸರುವಂತರ್ಯಾಮಿ ಲೋಕ ಸ್ವಾಮಿ|
ಸ್ಮರಣೆ ಮಾತ್ರದಿ ಅಜಮಿಳಗೆ ಮುಕ್ತಿಯನಿತ್ತೆ|
ಅರಿದೆನೊ ನೀನೀಗ ಪೊರೆವುದೆಮ್ಮೆ |
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ ಪರಿಪಾಲಕನೆಂಬ ಬಿರುದು ನಿನ್ನದ್ದವೆ || 1 ||

ಇದು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರು ರಚಿಸಿದ ನರಸಿಂಹ ಸುಳಾದಿಯ ಮೊದಲನೆಯ ನುಡಿಯಾಗಿದೆ.  ಇದರಲ್ಲಿ ಭಗವಂತನ ಸ್ತುತಿಯನ್ನು ಮಾಡುತ್ತಾ ಅವನ ಮಹಿಮೆಗಳನ್ನು ಕೊಂಡಾಡುತ್ತಾರೆ.  ಭಗವಂತನ ಕಷ್ಟಗಳೆಂಬ ಕಾಡಿಗೆ ಕೊಡಲಿಯಂತೆ, ದುರ್ಜನರ ಕುಲಕ್ಕೆ ವೈರಿಯೂ, ಶರಣಾಗತನಾದ ಭಕ್ತನಿಗೆ ಗಜೇಂದ್ರನನ್ನು ರಕ್ಷಿಸಿದಂತೆ ರಕ್ಷಿಸುವ ಕರುಣಾ ಮಯ, ಅವನು ಸ್ವರತ, ಸ್ವತಂತ್ರ, ಜಗತ್ತನ್ನೆಲ್ಲಾ ಆವರಿಸಿರುವವ, ಕ್ಷರಾಕ್ಷರ,   ಪುರುಷೋತ್ತಮ, ಶೇಷ ಶಯನ, ವೈಕುಂಠದಲ್ಲಿ ವಾಸವಾಗಿರುವವ, ಧರೆಯೊಳಗೆ ಅರುಜನನ ಸಾರಥಿಯೆನಿಸಿದವ ನರಸಿಂಹ ದೇವರೇ ನಿಮ್ಮ ಪಾದಕ್ಕೆರಗಿ ನಮಿಸುವೆ, ನಿನ್ನನ್ನು ಮೊರೆ ಹೊಕ್ಕಿರುವ ದಾಸಗೆ ಬಂದಿರುವ ಭಯವನನು ಪರಿಹರಿಸಿ ಸಲುಹು, ನೀನು ಸರ್ವಂತರ್ಯಾಮಿ, ಲೋಕಕ್ಕೆಲ್ಲಾ ಸ್ವಾಮಿ ನಿನ್ನನ್ನು ಸ್ಮರಣೆ ಮಾಡಿದ ಅಜಮಿಳಗೆ ಮುಕ್ತಿಯನ್ನು ನೀಡಿದ ನಿನಗೆ ಶರಣು ಬಂದಿರುವ ಭಕ್ತನ ಪೊರೆಯುವ ಹೇ ಜಗನ್ನಾಥವಿಠ್ಠಲ ಸ್ವಾಮಿ ಭಕ್ತ ಪರಿಪಾಲಕನೆಂಬ ಬಿರುದನ್ನನು ಹೊಂದಿರುವ ನೀನು ನಮ್ಮನ್ನು ಸಲಹು ಎಂಬುದಾಗಿ ಪ್ರಾರ್ಥಿಸುತ್ತಾರೆ.


Monday, May 4, 2020

ಆತ್ಮ ಸಮ್ಮಾನ ಅಥವಾ ಗೌರವ






ಏನು ಹೀಗೆ ಅಂದರೆ ? ನಮ್ಮ ದೃಷ್ಟಿಯಲ್ಲಿ ನಾವು ಗೌರವಾನ್ವಿತರಾಗಿ ಉಳಿಯುವುದು. ಯಾವುದೇ ಕೆಟ್ಟ ಹಾದಿಯಲ್ಲಿ ನಡೆಯದೇ ನಮ್ಮತನವನ್ನು ಉಳಿಸಿ ಕೊಳ್ಳುವುದು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸೆಲ್ಫ ರೆಸ್ಪೆಕ್ಟ ಅಂತಾರೆ. ನಮಗೆ ನಾವೇ ಬೆಲೆ ಕೊಡದೇ ಇದ್ದರೆ ಬೆರೆಯವ್ರು ಹೇಗೆ ಕೊಟ್ಟಾರು ಅಲ್ಲವೇ? ವ್ಯಕ್ತಿ ಹೆಣ್ಣೆ ಇರಲಿ ಗಂಡೇ ಇರಲಿ ಬೇರೆಯವರ ಅಡಿ ಆಳು ಅಥವಾ ಬೇರೆಯವರ ಕೈಗೊಂಬೆಯಾಗಿ ಬಾಳುವುದಕ್ಕಿಂತ ಕಷ್ಟ ಪಟ್ಟು ದುಡಿದು  ಆತ್ಮ ಗೌರವದಿಂದ ಬದುಕುವುದು ಉತ್ತಮ ಜೀವನ. ಮತ್ತೊಬ್ಬರ ಹಂಗಿನಲ್ಲಿ ನಮಗೆ ಯಾವುದೇ ಬೆಲೆ ಇಲ್ಲದೇ ಬದುಕುವ ಬದುಕು ಹೀನವಾದುದು. ನಮ್ಮತನವಿಲ್ಲದೇ ಒಂದು ಕೀಲು ಗೊಂಬೆಯಾಗಿ ಬಾಳುವುದು, ಮತ್ತೊಬ್ಬರ ಕೈ ಗೊಂಬೆಯಾಗುವುದಕ್ಕಿಂತ ಆತ್ಮ ಗೌರವದಿಂದ ಸಾಯುವುದು ಲೇಸು

ಇಂದಿನ ಪ್ರಪಂಚದಲ್ಲಿ ಈ ರೀತಿ ಆತ್ಮ ಗೌರವದಿಂದ ಬದುಕಲು ಪ್ರಯತ್ನಿಸುವವರು ಔಟ್‌ಡೇಟೆಡ್‌ ಎಂಬ ಭಾವನೆ ಇದೆ. ಯಾಕೆಂದರೆ ಎಲ್ಲರೂ ಹೊಗಳು ಭಟ್ಟರು, ಕಾರ್ಯವಾಸಿ ಕತ್ತೆ ಕಾಲು ಹಿಡಿಯಬಹುದೆಂಬ, ಅಥವಾ ಹಣ ಅಧಿಕಾರ ಇರುವವರು ತಾವು ಏನನ್ನಾದರೂ ಕೊಂಡು ಕೊಂಡೇವು ಎನ್ನುವ ಸೊಕ್ಕು ಮಾತನಾಡಿಸುತ್ತದೆ. ಯಾವುದೇ ಸಂಬಂಧವಿರಲಿ ವ್ಯಕ್ತಿ ಇರಲಿ ಪರಸ್ಪರ ಗೌರವ, ವಿಶ್ವಾಸವಿದ್ದಾಗ ಮಾತ್ರ ಜೀವನ ಸುಗಮ.

ಹೆಣ್ಣು ಮಕ್ಕಳಂತೂ ಹೆಜ್ಜೆ ಹೆಜ್ಜೆಗೂ ಆತ್ಮ ಸಮ್ಮಾನ ಅಥವಾ ಗೌರವಕ್ಕಾಗಿ ಹೋರಾಡುವ ಪರಿಸ್ಥಿತಿ ದಿನ ನಿತ್ಯವೂ ಇದೆ.  ಸಾಮಾಜ ಹೆಣ್ಣಿಗೆ ಕ್ಷಮಯಾ ಧರಿತ್ರಿ ಅಂತ ಕಲಿಸಲು ಪ್ರಯತ್ನಿಸುತ್ತದೆ ಆದರೆ ಗಂಡಿನ ರಾವಣ ಕಂಸನಾಗ ಬೇಡ ಎನ್ನುವುದಿಲ್ಲ.  ಇರಲಿ ಹೊಂದಿಕೊಂಡು ಹೋಗು ಅನ್ನುವುದು ಸರ್ವೇ ಸಾಮಾನ್ಯ ಹಾಗೆಂದು ದಬ್ಬಾಳಿಕೆಯನ್ನು ಮಾಡದ ಹೆಣ್ಣು ಮಕ್ಕಳಿದ್ದಾರೆ ಎಂದುಕೊಳ್ಳಬೇಡಿ ಅವರ ಸಂಖ್ಯೆಯೂ ಕಡಿಮೆ ಇಲ್ಲ.

ಆದರೆ ಆತ್ಮಗೌರವನ್ನು ಹೆಣ್ಣಾಗಲಿ ಗಂಡಾಗಲಿ ಬಿಡಬಾರದು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಬಾರದು. ಸ್ವಾಭಿಮಾನವನ್ನು ಬಿಟ್ಟು ಬದುಕಿದರೆ ಜೀವಂತ ಶವಕ್ಕೆ ಸಮ

ಮಾಧುರಿ