ದುರಿತವನ ಕುಠಾರಿ ದುರ್ಜನ ಕುಲವೈರಿ|
ಶರಣಾಗತ ವಜ್ರ ಪಂಜರ ಕುಂಜರ-1|
ವರ ಸಂರಕ್ಷಕ ಜನ್ಮಮರಣ ರಹಿತ ಮಹಿತ|
ಪರಮ ಕರುಣಾ ಸಿಂಧು ಭಕ್ತ ಬಂದು|
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖ ಪೂರ್ಣ|
ಉರುಗಾಯ ವೈಕುಂಠವರ ಮಂದಿರ ಚಂದಿರ|
ಹರಿಯೆ ಕ್ಷರಾಕ್ಷರ ಪುರುಷೋತ್ತಮ|
ತರಣಿಕೋಟಿ ಸಂಕಾಶ ವಿಮಲಕೇಶ|
ಧುರಗದೊಳಗರ್ಜುನನ ತುರಗ ನಡೆಸಿದ ಸಂ-|
ಗರ ಭಯಂಕರ ಲೋಕೈಕಧೀರ|
ನರಸಿಂಹ ನಿನ್ನ ಪಾದಕೆರಗಿ ಬೇಡಕೊಂಬೆ|
ಮೊರೆ ಹೊಕದಾಸಗೆ ಬಂದ ಭಯವ |
ಪರಿಹಸಿರಿ ಸೌಖ್ಯವ ಕರುಣಿಸು ದಯದಿಂದ|
ಸರುವಂತರ್ಯಾಮಿ ಲೋಕ ಸ್ವಾಮಿ|
ಸ್ಮರಣೆ ಮಾತ್ರದಿ ಅಜಮಿಳಗೆ ಮುಕ್ತಿಯನಿತ್ತೆ|
ಅರಿದೆನೊ ನೀನೀಗ ಪೊರೆವುದೆಮ್ಮೆ |
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ ಪರಿಪಾಲಕನೆಂಬ ಬಿರುದು ನಿನ್ನದ್ದವೆ || 1 ||
ಇದು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರು ರಚಿಸಿದ ನರಸಿಂಹ ಸುಳಾದಿಯ ಮೊದಲನೆಯ
ನುಡಿಯಾಗಿದೆ. ಇದರಲ್ಲಿ ಭಗವಂತನ ಸ್ತುತಿಯನ್ನು ಮಾಡುತ್ತಾ ಅವನ ಮಹಿಮೆಗಳನ್ನು ಕೊಂಡಾಡುತ್ತಾರೆ. ಭಗವಂತನ ಕಷ್ಟಗಳೆಂಬ ಕಾಡಿಗೆ
ಕೊಡಲಿಯಂತೆ, ದುರ್ಜನರ ಕುಲಕ್ಕೆ ವೈರಿಯೂ, ಶರಣಾಗತನಾದ
ಭಕ್ತನಿಗೆ ಗಜೇಂದ್ರನನ್ನು ರಕ್ಷಿಸಿದಂತೆ ರಕ್ಷಿಸುವ ಕರುಣಾ ಮಯ, ಅವನು
ಸ್ವರತ, ಸ್ವತಂತ್ರ, ಜಗತ್ತನ್ನೆಲ್ಲಾ
ಆವರಿಸಿರುವವ, ಕ್ಷರಾಕ್ಷರ, ಪುರುಷೋತ್ತಮ, ಶೇಷ ಶಯನ,
ವೈಕುಂಠದಲ್ಲಿ ವಾಸವಾಗಿರುವವ, ಧರೆಯೊಳಗೆ ಅರುಜನನ
ಸಾರಥಿಯೆನಿಸಿದವ ನರಸಿಂಹ ದೇವರೇ ನಿಮ್ಮ ಪಾದಕ್ಕೆರಗಿ ನಮಿಸುವೆ, ನಿನ್ನನ್ನು
ಮೊರೆ ಹೊಕ್ಕಿರುವ ದಾಸಗೆ ಬಂದಿರುವ ಭಯವನನು ಪರಿಹರಿಸಿ ಸಲುಹು, ನೀನು
ಸರ್ವಂತರ್ಯಾಮಿ, ಲೋಕಕ್ಕೆಲ್ಲಾ ಸ್ವಾಮಿ ನಿನ್ನನ್ನು ಸ್ಮರಣೆ ಮಾಡಿದ
ಅಜಮಿಳಗೆ ಮುಕ್ತಿಯನ್ನು ನೀಡಿದ ನಿನಗೆ ಶರಣು ಬಂದಿರುವ ಭಕ್ತನ ಪೊರೆಯುವ ಹೇ ಜಗನ್ನಾಥವಿಠ್ಠಲ
ಸ್ವಾಮಿ ಭಕ್ತ ಪರಿಪಾಲಕನೆಂಬ ಬಿರುದನ್ನನು ಹೊಂದಿರುವ ನೀನು ನಮ್ಮನ್ನು ಸಲಹು ಎಂಬುದಾಗಿ
ಪ್ರಾರ್ಥಿಸುತ್ತಾರೆ.