Tuesday, July 7, 2020

ಬೆಂಗಳೂರು ಮತ್ತು ಜನರ ವಲಸೆ

ಈ ಒಂದು ವಾರದ ಹೊಸ ಬೆಳವಣಿಗೆ ಬೆಂಗಳೂರು ವಾಸಕ್ಕೆ ಯೋಗ್ಯವಿಲ್ಲ ಅಂತ ತಮ್ಮೂರಿಗೆ ಹೊರಟ ಜನರ ವಿಚಾರ ಚರ್ಚೆ ಆಗ್ತಿದೆ.  ನಮ್ಮದೂ ಮೂಲ ಊರು ವಿಜಾಪುರವೇ ಆದರೂ ನನ್ನೂರು ಬೆಂಗಳೂರೇ ನಾನು ಹುಟ್ಟಿ ಬೆಳೆದ ನನ್ನ ಜೀವನ ರೂಪಿಸಿ ಕೊಂಡ ನನ್ನ ಮನೆ.  ಯಾವುದೇ ಊರನ್ನು ನಾವು ಬಳಕೆಗೆ ಅವಕಾಶಕ್ಕೆ ಸೇರಿದಾಗ ಮತ್ತೊಂದು ಹುಡುಕೋದು ಸಹಜ.  ಈಗ ಬೆಂಗಳೂರು ಬಿಟ್ಟು ಹೋದವರು ತಮ್ಮ ಸ್ವಂತ ಊರನ್ನು ಬಿಟ್ಟು ಬರುವಾಗ ಬೆಂಗಳೂರು ಒಂದು ಆಯ್ಕೆ ಎಂದು ಬಂದವರು ಅಷ್ಟೆ.  ಬಹಳ ಜನ ಊರು ಬಿಟ್ಟು ಬೇರೆ ಊರಿಗೆ ಸೇರುವಾಗ ಕೆಲವು  ಜನರಿಗೆ ತೊಂದರೆ ಆಗೋದು ಸಹಜ.  ಆದರೂ ಪರಿಸ್ಥಿತಿ ಬದಲಾವಣೆ ಎಲ್ಲರಿಗೂ ಅನಿವಾರ್ಯ.  ಸಾವಿಗೆ ಹೆದರಿ ಊರು ಬಿಟ್ಟವರು ಸಾವು ಎಲ್ಲೂ ತಮ್ಮ ಬೆನ್ನು ಬಿಡುವುದಿಲ್ಲ ಎಂಬ ಸತ್ಯವನ್ನು ಅರಿತಿರುವುದಿಲ್ಲ. 
ಬೆಂಗಳೂರಿಗರೇ ಹಾಗೆ ಬಿಟ್ಟು ಹೋದ ವಲಸೆ ಜನರ ಬಗೆಗೆ ಆಡಿ ಕೊಳ್ಳುವುದು ಅಸಮಾಧಾನ ಪಡುವುದನ್ನು ಬಿಡಿ. ಏಕೆಂದರೆ ಹಿಂದೊಮ್ಮೆ ಟ್ರಾಫಿಕ್‌ ಸಮಸ್ಯೆಗಾಗಿ, ಬೆಲೆ ಏರಿಕೆಗಾಗಿ, ಪರಿಸರ ಮಾಲಿನ್ಯಕ್ಕಾಗಿ ಇವರನ್ನೇ ಅಲ್ಲವೇ ದೂಷಿಸಿದ್ದು?
ಯಾವ ಯಾವ ಸಮಯಕ್ಕೆ ಏನಾಗುತ್ತದೋ ಅದನ್ನು ಎದುರಿಸಲೇ ಬೇಕು.  ಕಷ್ಟದ ಸಮಯ ಬಂದಾಗ ನಮ್ಮವರೊಂದಿಗೆ ಇರಲು ಹೊರಟಿದ್ದೇವೆ ಎಂದು ಅವರು ಹೇಳಿದಾಗ ನಮ್ಮ ಜಾಗ ನಮಗೆ ಕಡಿಮೆ ಬಾಡಿಗೆಗೆ ಸಿಕ್ಕಿತು ಎಂದು ಕೊಳ್ಳಿ. ನಮ್ಮ ಓಣಿಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿ ನಮಗೆ ಶುದ್ಧ ಗಾಳಿ ನೀರು ಸಿಕ್ಕಿತು ಎಂದು ಕೊಳ್ಳಿ.
ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದಾಗ ಎಂದಿಗೂ ಎರಡು ರೀತಿಯ ಪ್ರಭಾವ ಇರುತ್ತದೆ. ಒಂದು ಸಕಾರಾತ್ಮಕ ಮತ್ತೊಂದು ನಕಾರಾತ್ಮಕ.  ಸಕಾರಾತ್ಮಕವಾದ ವಿಚಾರ ಮಾಡುವವನು ಎಲ್ಲ ಸಂದರ್ಭವನ್ನು ಎದುರಿಸುವ ವಿಚಾರ ಮಾಡಿದರೆ ನಕಾರಾತ್ಮಕ ವಿಚಾರದವನು ತಾನೊಬ್ಬನೇ ಅಲ್ಲದೇ ತನ್ನೊಂದಿಗಿರುವ ನಾಲ್ಕಾರು ಜನರನ್ನೂ ಹೆದರಿಸುತ್ತಾನೆ ಮೊದಲು  ನಾವು ಸಕಾರಾತ್ಮಕವಾಗಿ ಬದುಕೋಣ. ಬೆರೆಯವರ ಬಗೆಗೆ ನಂತರ ಯೋಚಿಸೋಣ. ಮನೆಯಲ್ಲೇ ಇರೋಣ. ಆರೋಗ್ಯವಂತರಾಗಿ ಇರೋಣ

ವಿಷಯ :- ಹೆತ್ತವರ ಮುಪ್ಪಿನಲ್ಲಿ ಮಕ್ಕಳ ಕರ್ತವ್ಯ


ಈಗಿನ ಕಾಲದಲ್ಲಿ ಬಹಳ ಸೂಕ್ಷ್ಮ ವಿಷಯ. ಮೊದಲೆಲ್ಲಾ ತಂದೆ ತಾಯಿಯರನ್ನು ಬಿಟ್ಟು ಇರುವ ಕಲ್ಪನೆ ಇರಲೇ ಇಲ್ಲ. ತಂದೆ ತಾಯಿಯರ ಒಡನಾಟ ಸಾನಿಧ್ಯ ಇದು ಸಣ್ಣ ಮಕ್ಕಳಾದಾಗ ನಮ್ಮ ಅವಶ್ಯಕತೆ ಇರುವ ಹಾಗೆ ವಯಸ್ಸಾದ ಮೇಲೆ ಅವರನ್ನು ನೋಡಿ ಕೊಳ್ಳುವುದು ಅವರ ಊಟ ಬಟ್ಟೆ ಅಷ್ಟೆ ಅಲ್ಲ ಅವರ ಎಲ್ಲ ಬೇಕು ಬೇಡಗಳನ್ನು ನೋಡಿ ಕೊಳ್ಳುವುದು ಸದಾ ಅವರಿಗೆ ಒಂಟಿಯಾಗಿರಲು ಬಿಡದೇ ನೋಡಿ ಕೊಳ್ಳುವುದು ಯುವ ಜನರ ಕರ್ತವ್ಯವಾಗಿದೆ.
ನಾವು ಹುಟ್ಟಿದಾಗಿನಿಂದ ನಮ್ಮ ಬೇಕು ಬೇಡಗಳನ್ನು ನಾವು ಕೇಳುವ ಮೊದಲೇ ಒದಗಿಸಿದ ಅವರಿಗೆ ಅವರ ವಯಸ್ಸಾದ ಕಾಲದಲ್ಲಿ ಅವರ ಅವಶ್ಯಕತೆ ಅನುಕೂಲತೆಯ ವಿಚಾರ ಮಾಡಿ ನಮ್ಮ ಬದುಕಿನಲ್ಲಿ ಸಣ್ಣ ಮಾರ್ಪಾಡು ಮಾಡಿಕೊಳ್ಳುವುದರಲ್ಲಿ ಯಾವ ದೊಡ್ಡ ಉಪಕಾರದ ಕೆಲಸವಾಗಿರುವುದಿಲ್ಲ. ಅದು ನಮ್ಮ ಕರ್ತವ್ಯವಾಗಿರುತ್ತದೆ.  ಈಗಿನ ಕಾಲದ ಹೊಸ ಹೊಸ ತಂತ್ರಜ್ಞಾನ ಅಥವಾ ಪದ್ಧತಿಗಳಿಗೆ ಅವರು ಒಗ್ಗಿಕೊಂಡಿಲ್ಲವೆಂದರೆ ಅವರು ದಡ್ಡರೆಂದಲ್ಲ ಅವರು ಸಂಪೂರ್ಣ ಚಟುವಟಿಕೆಯಿಂದ ಇರುವಾಗ ಇತ್ತೀಚಿನ ತಂತ್ರಜ್ಞಾನಗಳ ಅವಿಷ್ಕಾರವಾಗಿದ್ದಲ್ಲಿ ಅವರು ನಮಗಿಂತ ಹೆಚ್ಚು ಸಮಂಜಸವಾಗಿ ಬಳಸುತ್ತಿದ್ದರು. ನಮ್ಮ ಹೆತ್ತವರು ವಯಸ್ಸಾದ ಮೇಲೆ ನಮ್ಮ ಮಕ್ಕಳು ಮತ್ತು ಹೆತ್ತವರು ಇಬ್ಬರನ್ನೂ ಸಮ ಭಾವದಿಂದ ನೋಡಿಕೊಳ್ಳಬೇಕು.
ಮಕ್ಕಳಿಗೆ ತೋರಿಸುವಷ್ಟೇ ಪ್ರೀತಿ ವಿಶ್ವಾಸ ಮತ್ತು ಕಾಳಜಿಯನ್ನು ವೃದ್ಧ ತಂದೆ ತಾತಿಯರಿಗೂ ತೋರಿಸಬೇಕು. ವ್ಯತ್ಯಾಸ ಇಷ್ಟೆ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ತಾಡಿಸಬಹುದು ಆದರೆ ಹೆತ್ತವರಿಗೆ ತಿಳಿಸಿ ಹೇಳಬೇಕು.  ಇನ್ನೊಂದು ಮುಖ್ಯವಾಗಿ ಹೆತ್ತವರಿಗೆ ತೋರಿಸಬೇಕಾದದ್ದು ಗೌರವವನ್ನು, ಇಂದಿನ ಯುವ ಸಮಾಜದಲ್ಲಿ ತಂದೆ ತಾಯಿಯರ ಬಗೆಗೆ ಅಸಡ್ಡೆ ಬಹಳವಾಗುತ್ತಿದೆ. ಕಟ್ಟ ಕಡೆಯ ಸತ್ಯವೆಂದರೆ  ನಾವು ಕೂಸಾಗಿದ್ದಾಗಿನಿಂದ ನಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡಿದ ಆ ಪೂಜ್ಯರನ್ನು ಮಕ್ಕಳಂತೆ ಲಾಲಿಸಿ, ಪ್ರೀತಿಸಿ ನಡೆದಾಡುವ ದೇವರಂತೆ ಪೂಜಿಸಿದಾಗ ನಮ್ಮ ಕರ್ತವ್ಯವನ್ನು ನಾವು ಮಾಡಿದಂತೆ. 
ಜೀವಂತ ಇರುವಾಗ ಅವರ ಬಗ್ಗೆ ಅಸಡ್ಡೆ ತೋರುವುದು, ದೂಷಿಸುವುದು, ಅವಮಾನ ಮಾಡುವುದು ಅವರ ಮನಸ್ಸಿಗೆ ನೋಯಿಸಿ ನಂತರ ಶ್ರಾದ್ಧಾದಿಗಳನ್ನು ಮಾಡಿ ದಾನ ಧರ್ಮಗಳನ್ನು ಮಾಡಿ ದೊಡ್ಡ ದೊಡ್ಡ ಭಾವಚಿತ್ರ ಇಟ್ಟು ಹಾರ ಹಾಕುವುದಕ್ಕಿಂತ ಇದ್ದಾಗ ಪ್ರೀತಿಸಿ, ಪೂಜಿಸಿ, ಲಾಲಿಸಿ ಅವರ ಪ್ರೀತಿ ಪಾತ್ರರಾಗುವುದು ಯುವ ಜನರ ಕರ್ತವ್ಯ

Sunday, May 17, 2020


ವಿಧಿಪಿತ ನೋನಲ್ಲದೆ ನಿಧಿಪತಿಗಳು ಉಂಟೆ|
ಸಧನನಾಗಿ ಇಪ್ಪೆ ನಿನ್ನ ದಾಸರಿಗಾಗಿ|
ಮಧುಸೂದನ ಜಗನ್ನಾಥವಿಠ್ಠಲರೇಯ |
ನಿಧನನೆನಿಸಿ ಕೊಂಡೆ ನಿನ್ನ ದ್ವೇಷಿಗಳಿಗೆ || 2 ||

ಬ್ರಹ್ಮಾದಿ ದೇವತೆಗಳಿಗೆ ತಂದೆಯಾದ ನಿನ್ನಷ್ಟು ದೊಡ್ಡ ನಿಧಿಪತಿಯು ಬೇರೆಯಾರಿದ್ದಾರೆ? ನಿನ್ನ ನಂಬಿ ಬಂದಂತಹ ಭಕ್ತರಿಗೆ ಸದಾ ಧನೌಂತನಾಗಿದ್ದು ಸಂಪತ್ಪ್ರದಾಯಕ ನಾಗಿರುವ ನೀನು, ನಿನ್ನನ್ನು ದ್ವೇಷಿಸುವ ಶತೃಗಳಿಗೆ  ಮರಣ ಸದೃಶವಾಗಿರುವೆ.

ನರಸಿಂಹ ಸುಳಾದಿ


ದುರಿತವನ ಕುಠಾರಿ ದುರ್ಜನ ಕುಲವೈರಿ|
ಶರಣಾಗತ ವಜ್ರ ಪಂಜರ ಕುಂಜರ-1|
ವರ ಸಂರಕ್ಷಕ ಜನ್ಮಮರಣ ರಹಿತ ಮಹಿತ|
ಪರಮ ಕರುಣಾ ಸಿಂಧು ಭಕ್ತ ಬಂದು|
ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖ ಪೂರ್ಣ|
ಉರುಗಾಯ ವೈಕುಂಠವರ ಮಂದಿರ ಚಂದಿರ|
ಹರಿಯೆ ಕ್ಷರಾಕ್ಷರ ಪುರುಷೋತ್ತಮ|
ತರಣಿಕೋಟಿ ಸಂಕಾಶ ವಿಮಲಕೇಶ|
ಧುರಗದೊಳಗರ್ಜುನನ ತುರಗ ನಡೆಸಿದ ಸಂ-|
ಗರ ಭಯಂಕರ ಲೋಕೈಕಧೀರ|
ನರಸಿಂಹ ನಿನ್ನ ಪಾದಕೆರಗಿ ಬೇಡಕೊಂಬೆ|
ಮೊರೆ ಹೊಕದಾಸಗೆ ಬಂದ ಭಯವ |
ಪರಿಹಸಿರಿ ಸೌಖ್ಯವ ಕರುಣಿಸು ದಯದಿಂದ|
ಸರುವಂತರ್ಯಾಮಿ ಲೋಕ ಸ್ವಾಮಿ|
ಸ್ಮರಣೆ ಮಾತ್ರದಿ ಅಜಮಿಳಗೆ ಮುಕ್ತಿಯನಿತ್ತೆ|
ಅರಿದೆನೊ ನೀನೀಗ ಪೊರೆವುದೆಮ್ಮೆ |
ಸರುವ ಕಾಮದ ಜಗನ್ನಾಥವಿಠ್ಠಲ ಭಕ್ತ ಪರಿಪಾಲಕನೆಂಬ ಬಿರುದು ನಿನ್ನದ್ದವೆ || 1 ||

ಇದು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರು ರಚಿಸಿದ ನರಸಿಂಹ ಸುಳಾದಿಯ ಮೊದಲನೆಯ ನುಡಿಯಾಗಿದೆ.  ಇದರಲ್ಲಿ ಭಗವಂತನ ಸ್ತುತಿಯನ್ನು ಮಾಡುತ್ತಾ ಅವನ ಮಹಿಮೆಗಳನ್ನು ಕೊಂಡಾಡುತ್ತಾರೆ.  ಭಗವಂತನ ಕಷ್ಟಗಳೆಂಬ ಕಾಡಿಗೆ ಕೊಡಲಿಯಂತೆ, ದುರ್ಜನರ ಕುಲಕ್ಕೆ ವೈರಿಯೂ, ಶರಣಾಗತನಾದ ಭಕ್ತನಿಗೆ ಗಜೇಂದ್ರನನ್ನು ರಕ್ಷಿಸಿದಂತೆ ರಕ್ಷಿಸುವ ಕರುಣಾ ಮಯ, ಅವನು ಸ್ವರತ, ಸ್ವತಂತ್ರ, ಜಗತ್ತನ್ನೆಲ್ಲಾ ಆವರಿಸಿರುವವ, ಕ್ಷರಾಕ್ಷರ,   ಪುರುಷೋತ್ತಮ, ಶೇಷ ಶಯನ, ವೈಕುಂಠದಲ್ಲಿ ವಾಸವಾಗಿರುವವ, ಧರೆಯೊಳಗೆ ಅರುಜನನ ಸಾರಥಿಯೆನಿಸಿದವ ನರಸಿಂಹ ದೇವರೇ ನಿಮ್ಮ ಪಾದಕ್ಕೆರಗಿ ನಮಿಸುವೆ, ನಿನ್ನನ್ನು ಮೊರೆ ಹೊಕ್ಕಿರುವ ದಾಸಗೆ ಬಂದಿರುವ ಭಯವನನು ಪರಿಹರಿಸಿ ಸಲುಹು, ನೀನು ಸರ್ವಂತರ್ಯಾಮಿ, ಲೋಕಕ್ಕೆಲ್ಲಾ ಸ್ವಾಮಿ ನಿನ್ನನ್ನು ಸ್ಮರಣೆ ಮಾಡಿದ ಅಜಮಿಳಗೆ ಮುಕ್ತಿಯನ್ನು ನೀಡಿದ ನಿನಗೆ ಶರಣು ಬಂದಿರುವ ಭಕ್ತನ ಪೊರೆಯುವ ಹೇ ಜಗನ್ನಾಥವಿಠ್ಠಲ ಸ್ವಾಮಿ ಭಕ್ತ ಪರಿಪಾಲಕನೆಂಬ ಬಿರುದನ್ನನು ಹೊಂದಿರುವ ನೀನು ನಮ್ಮನ್ನು ಸಲಹು ಎಂಬುದಾಗಿ ಪ್ರಾರ್ಥಿಸುತ್ತಾರೆ.


Monday, May 4, 2020

ಆತ್ಮ ಸಮ್ಮಾನ ಅಥವಾ ಗೌರವ






ಏನು ಹೀಗೆ ಅಂದರೆ ? ನಮ್ಮ ದೃಷ್ಟಿಯಲ್ಲಿ ನಾವು ಗೌರವಾನ್ವಿತರಾಗಿ ಉಳಿಯುವುದು. ಯಾವುದೇ ಕೆಟ್ಟ ಹಾದಿಯಲ್ಲಿ ನಡೆಯದೇ ನಮ್ಮತನವನ್ನು ಉಳಿಸಿ ಕೊಳ್ಳುವುದು. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸೆಲ್ಫ ರೆಸ್ಪೆಕ್ಟ ಅಂತಾರೆ. ನಮಗೆ ನಾವೇ ಬೆಲೆ ಕೊಡದೇ ಇದ್ದರೆ ಬೆರೆಯವ್ರು ಹೇಗೆ ಕೊಟ್ಟಾರು ಅಲ್ಲವೇ? ವ್ಯಕ್ತಿ ಹೆಣ್ಣೆ ಇರಲಿ ಗಂಡೇ ಇರಲಿ ಬೇರೆಯವರ ಅಡಿ ಆಳು ಅಥವಾ ಬೇರೆಯವರ ಕೈಗೊಂಬೆಯಾಗಿ ಬಾಳುವುದಕ್ಕಿಂತ ಕಷ್ಟ ಪಟ್ಟು ದುಡಿದು  ಆತ್ಮ ಗೌರವದಿಂದ ಬದುಕುವುದು ಉತ್ತಮ ಜೀವನ. ಮತ್ತೊಬ್ಬರ ಹಂಗಿನಲ್ಲಿ ನಮಗೆ ಯಾವುದೇ ಬೆಲೆ ಇಲ್ಲದೇ ಬದುಕುವ ಬದುಕು ಹೀನವಾದುದು. ನಮ್ಮತನವಿಲ್ಲದೇ ಒಂದು ಕೀಲು ಗೊಂಬೆಯಾಗಿ ಬಾಳುವುದು, ಮತ್ತೊಬ್ಬರ ಕೈ ಗೊಂಬೆಯಾಗುವುದಕ್ಕಿಂತ ಆತ್ಮ ಗೌರವದಿಂದ ಸಾಯುವುದು ಲೇಸು

ಇಂದಿನ ಪ್ರಪಂಚದಲ್ಲಿ ಈ ರೀತಿ ಆತ್ಮ ಗೌರವದಿಂದ ಬದುಕಲು ಪ್ರಯತ್ನಿಸುವವರು ಔಟ್‌ಡೇಟೆಡ್‌ ಎಂಬ ಭಾವನೆ ಇದೆ. ಯಾಕೆಂದರೆ ಎಲ್ಲರೂ ಹೊಗಳು ಭಟ್ಟರು, ಕಾರ್ಯವಾಸಿ ಕತ್ತೆ ಕಾಲು ಹಿಡಿಯಬಹುದೆಂಬ, ಅಥವಾ ಹಣ ಅಧಿಕಾರ ಇರುವವರು ತಾವು ಏನನ್ನಾದರೂ ಕೊಂಡು ಕೊಂಡೇವು ಎನ್ನುವ ಸೊಕ್ಕು ಮಾತನಾಡಿಸುತ್ತದೆ. ಯಾವುದೇ ಸಂಬಂಧವಿರಲಿ ವ್ಯಕ್ತಿ ಇರಲಿ ಪರಸ್ಪರ ಗೌರವ, ವಿಶ್ವಾಸವಿದ್ದಾಗ ಮಾತ್ರ ಜೀವನ ಸುಗಮ.

ಹೆಣ್ಣು ಮಕ್ಕಳಂತೂ ಹೆಜ್ಜೆ ಹೆಜ್ಜೆಗೂ ಆತ್ಮ ಸಮ್ಮಾನ ಅಥವಾ ಗೌರವಕ್ಕಾಗಿ ಹೋರಾಡುವ ಪರಿಸ್ಥಿತಿ ದಿನ ನಿತ್ಯವೂ ಇದೆ.  ಸಾಮಾಜ ಹೆಣ್ಣಿಗೆ ಕ್ಷಮಯಾ ಧರಿತ್ರಿ ಅಂತ ಕಲಿಸಲು ಪ್ರಯತ್ನಿಸುತ್ತದೆ ಆದರೆ ಗಂಡಿನ ರಾವಣ ಕಂಸನಾಗ ಬೇಡ ಎನ್ನುವುದಿಲ್ಲ.  ಇರಲಿ ಹೊಂದಿಕೊಂಡು ಹೋಗು ಅನ್ನುವುದು ಸರ್ವೇ ಸಾಮಾನ್ಯ ಹಾಗೆಂದು ದಬ್ಬಾಳಿಕೆಯನ್ನು ಮಾಡದ ಹೆಣ್ಣು ಮಕ್ಕಳಿದ್ದಾರೆ ಎಂದುಕೊಳ್ಳಬೇಡಿ ಅವರ ಸಂಖ್ಯೆಯೂ ಕಡಿಮೆ ಇಲ್ಲ.

ಆದರೆ ಆತ್ಮಗೌರವನ್ನು ಹೆಣ್ಣಾಗಲಿ ಗಂಡಾಗಲಿ ಬಿಡಬಾರದು. ನಮಗೆ ಬೆಲೆ ಇಲ್ಲದ ಜಾಗದಲ್ಲಿ ಇರಬಾರದು. ಸ್ವಾಭಿಮಾನವನ್ನು ಬಿಟ್ಟು ಬದುಕಿದರೆ ಜೀವಂತ ಶವಕ್ಕೆ ಸಮ

ಮಾಧುರಿ

Tuesday, April 28, 2020

ಪೀತಿ



ನಮ್ಮ ಕನ್ನಡ ಭಾಷೆ ಬಹಳ ವಿಶಾಲವಾದದ್ದು, ಒಂದೇ ಪದಕ್ಕೆ ಹತ್ತಾರು ಭಾವನೆಗಳನ್ನು ಬಳಸಬೇಕು ಅಂತಿಲ್ಲ.  ಅದಕ್ಕೆ ಉತ್ತಮ ಉದಾಹರಣೆ ಈ ಪ್ರೀತಿ ಎನ್ನುವ ಪದ. ಆಂಗ್ಲದಲ್ಲಿ ಲವ್‌ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹೀಗೆ ಬಹಳಷ್ಟು ಪದಗಳ ಸಮಾನಾರ್ಥಕ ಪದವಾಗುತ್ತದೆ.  ನಮ್ಮಲ್ಲಿ ತಾಯಿ ಮಕ್ಕಳ ಪ್ರೀತಿಗೆ ವಾತ್ಸಲ್ಯ ಎನ್ನುತ್ತೇವೆ, ಹುಡುಗ-ಹುಡುಗಿ ಪ್ರೀತಿಗೆ ಪ್ರಣಯ ಅನ್ನುತ್ತೇವೆ.  ನಮ್ಮಲ್ಲಿ ಒಂದೇ ಭಾವಕ್ಕೆ ಹಲವಾರು ಪದಗಳು.  ಪ್ರೀತಿಯ ಅರ್ಥ ಖಚಿತವಾಗಿ ಹೇಳಲು ಕಷ್ಟು ಸಾಮಾನ್ಯವಾಗಿ ನಮಗೆ ಯಾರಾದರೂ ಒಬ್ಬರನ್ನೋ ಅಥವಾ ಯಾವುದೇ ವಸ್ತುವನ್ನು ಬಿಟ್ಟಿರಲಾರದಷ್ಟು ಮೋಹ ಬಂದರೆ ಅದನ್ನು ಪ್ರೀತಿ ಎಂದು ಅರ್ಥ ಮಾಡಿಕೊಳ್ಳುತ್ತೇವೆ.

ಪ್ರಪಂಚ ನಡೆಯುವುದೇ ಈ ಪ್ರೀತಿಯ ಆಧಾರದ ಮೇಲೆ, ಮಗು ಮೊದಲು ಕಾಣುವುದೇ ತಾಯಿಯ ಪ್ರೀತಿಯನ್ನು, ನಂತರ ತಂದೆ, ಸಹೋದರ, ಸಹೋದರಿಯರು, ಬಂಧು ಬಾಂಧವರು,  ನಂತರ ಶಿಕ್ಷಕರು, ಸ್ನೇಹಿತರು ಹೀಗೆ ಪ್ರೀತಿ ತೋರುವ ಜನರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.  ಸಣ್ಣ ಮಕ್ಕಳಿದ್ದಾಗ ಈ ಪ್ರೀತಿ ಎಂದರೆ ಏನು ನಾವು ಯಾರನ್ನು ಪ್ರೀತಿಸುತ್ತೇವೆ ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರು ಯಾರು ಎಂಬ ಅರಿವೇ ಇರುವುದಿಲ್ಲ. ದಿನಗಳೆದಂತೆ ತಿಳುವಳಿಕೆ ಬಂದಂತೆ ಪ್ರೀತಿಯ ಭಾವ ಮನಸ್ಸಿನಲ್ಲಿ ಜಾಗೃತವಾಗುತ್ತದೆ ಮತ್ತು ನಮ್ಮನ್ನು ಯಾರಾದರೂ ಪ್ರೀತಿ ಮಾಡಲಿ ಎಂದು ಭಾವನೆ ಸಹಜವಾಗಿ ಹುಟ್ಟುತ್ತದೆ. ಆಗ ಪ್ರೀತಿಯ ಹುಡುಕಾಟ ಆರಂಭವಾಗುತ್ತದೆ.

ಪ್ರೀತಿಯ ಬಗೆಗೆ ಎಲ್ಲ ಭಾಷೆಗಳಲ್ಲೂ ಕವಿತೆಗಳನ್ನು ಎಷ್ಟೋ ಜನ ಕವಿಗಳು ಬರೆದಿದ್ದಾರೆ. ನನಗೆ ಮನಸ್ಸಿಗೆ ಹಿಡಿಸಿದ್ದು ಜಯಶಂಕರ ಪ್ರಸಾದರ "ಮುಝೆ ಪ್ಯಾರರ್‌ ನ ಮಿಲಾ" ಎಂಬ ಕವಿತೆ ಆ ಕವಿತೆಯ ಆಶಯ ಕವಿ ಒಮ್ಮೆ ಪ್ರೀತಿಯನ್ನು ಹುಡುಕಲು ಹೊರಡುತ್ತಾರೆ ಅವರಿಗೆ ಎಲ್ಲ ಪ್ರೀತಿ ಸಿಗುತ್ತಿಲ್ಲ ಎಂಬ ಭಾವನೆ ಬರುತ್ತದೆ ಅದೇ ನಿಟ್ಟಿನಲ್ಲಿ ಅವರು ಯೋಚಿಸುತ್ತಿರುವಾಗ  ಅವರಿಗೆ ಅನಿಸುತ್ತದೆ, ಇಷ್ಟು ದಿನ ನನ್ನನ್ನೇ ಪ್ರೀತಿ ಮಾಡಲಿ ಎಂದು ಹೊರಟಿದ್ದೆ ಆದ್ದರಿಂದ ಸಿಗುತ್ತಿಲ್ಲ, ನಾನು ಬೇರೆಯವರನ್ನು ಪ್ರೀತಿಸಿದಾಗ ಸಿಗಬಹುದೇನೋ ಎನ್ನುತ್ತಾರೆ.

ಬನ್ನಿ ಪ್ರೀತಿ ಹಂಚೋಣ. ನಿಸ್ವಾರ್ಥ ಪ್ರೀತಿಗೆ ಕಳೆದು ಕೊಳ್ಳೋದು ಏನು ಇಲ್ಲ, ಮಾನವೀಯತೆ, ಸೌಹಾರ್ದತೆ ಎಂಬ ದೊಡ್ಡ ದೊಡ್ಡ ಶಬ್ದ ಎಲ್ಲಾ ಬೇಡ. ಜೀವನಕ್ಕೆ ಸರಳ ದಾರಿ  ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳನ್ನು ಪ್ರೀತಿಸಿ ನಮಗೆ ಅಂತ ದೊರೆತ ವಸ್ತುಗಳನ್ನು ಪ್ರೀತಿಸಿ ಯಾರಾದರೂ ಪ್ರೀತಿ ತೋರಿಸುತ್ತಾರೆ. ಪ್ರೀತಿ ಜೀವನದ ಸಾರ. ಜೀವನವನ್ನು ಪ್ರೀತಿಸೋಣ, ಜೀವಿಗಳನ್ನು ಪ್ರೀತಿಸೋಣ.

ಮಾಧುರಿ 

Monday, April 27, 2020

ಸೌಂದರ್ಯ



ಸುಂದರವಾದ ವಸ್ತು ಅಥವಾ ವ್ಯಕ್ತಿಯ ಬಾಹ್ಯ ರೂಪಕ್ಕೆ ಮಾತ್ರ ಸೌಂದರ್ಯ ಅನ್ನೊಲ್ಲ.  ಮನಸ್ಸು ಕೂಡ ಸುಂದರವಾಗಿರತ್ತೆ.  ಸೌಂದರ್ಯ ವ್ಯಕ್ತಿ ಅಥವಾ ವಸ್ತುವಿನಲ್ಲಿರುವುದಿಲ್ಲ ನೋಡುವವರ ಕಣ್ಣಿನಲ್ಲಿರುತ್ತದೆ. ಪ್ರಪಂಚದಲ್ಲಿ ಯಾವಾಗಲೂ ಸುಂದರ ಅನಿಸೋದು ಮಕ್ಕಳ ನಗು, ತಾಯಿಯ ಪ್ರೀತಿ, ಭಗವಂತನ ಅದ್ಭುತ ಸೃಷ್ಟಿಯಾದ ಪ್ರಕೃತಿ.

ಕೆಲವರಿಗೆ ಬಣ್ಣ, ರೂಪ ಅಷ್ಟೆ ಸೌಂದರ್ಯ ಅಂದು ಕೊಳ್ಳುವವರಿದ್ದಾರೆ ಬಣ್ಣವೂ ಬದಲಾಗಬಹುದು ರೂಪವೂ ಮಾಸಬಹುದು. ಆದರೆ ಸದಾ ಹಸಿರಾಗಿರುವುದು ಮನುಷ್ಯನ ಮನಸ್ಸು ಮತ್ತು ಆತನ ಸ್ವಭಾವ.  ಮೇಕಪ್‌ ಮಾಡಿಕೊಂಡು ವಿವಿಧ ಶೈಲಿಯ ಉಡುಗೆ-ತೊಡುಗೆಗಳಿದ ಸುಂದರವಾಗಿರುವುದಕ್ಕಿಂತ ನಿಮ್ಮ ವ್ಯಕ್ತಿತ್ವದಿಂದ ನಿಮ್ಮ ಸ್ವಭಾವದಿಂದ ಅಂದವಾಗಿರಿ

ಯಾರೋ ಒಬ್ಬರು ಲಕ್ಷಣವಾಗಿದ್ದಾಗ ನಾವು ಸಹಜವಾಗಿ ನೀವು ತುಂಬ ಸುಂದರವಾಗಿದ್ದೀರಿ ಅಂದು ಬಿಡುತ್ತೇವೆ. ಅವರೊದಿಗೆ ಒಬ್ಬ ಸಾಮಾನ್ಯ ರೂಪಿನ ವ್ಯಕ್ತಿಗೆ ಅಯ್ಯೋ ನಾವು ಚಂದ ಇಲ್ಲ ಎನ್ನುವ ಹೀನತಾ ಭಾವ ಬರಬಹುದು ಅಲ್ಲವೇ? ಮತ್ತೊಬ್ಬರ ಮನಸ್ಸನ್ನು ಅನಾವಶ್ಯಕ ನೋಯಿಸಿ ಇನ್ನೊಬ್ಬರನ್ನು ಹೊಗಳುವುದು ತಪ್ಪಲ್ಲವೇ? ವ್ಯಕ್ತಿತ್ವನ್ನು ಪ್ರೀತಿಸಿ ವ್ಯಕ್ತಿತ್ವವನ್ನು ಆರಾಧಿಸಿ ಸೌಂದರ್ಯ ಕ್ಷಣಿಕ ಎಲ್ಲದಕ್ಕೂ ಒಂದು ಕಾಲ ಮುಂಜಾನೆ ಅರಳಿದ ಹೂವು ಸಂಜೆಗೆ ಬಾಡುತ್ತದೆ. ಯೌವ್ವನದ ಸೌಂದರ್ಯ ಮುಪ್ಪಿನಲ್ಲಿರುವುದಿಲ್ಲ. ಎಲ್ಲ ವ್ಯಕ್ತಿಗಳ ಗುರುತು ಅವರ ಮುಖ ಲಕ್ಷಣದಿಂದ ಗುರುತಿಸಬಹುದು.  ನಿಮ್ಮ ನಗು ನಿಮ್ಮ ಸ್ವಭಾವ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.  ಎಲ್ಲ ಹೂವುಗಳು ಚಂದ ಆದರೆ ಒಂದು ಹೂವಿನ ಉಪಯೋಗ ಒಂದೊಂದು ಬಗೆ ಅದೇ ರೀತಿ ಪ್ರತಿಯೊಬ್ಬ ಜೀವಿಯೂ ಚಂದ ಅವರವರ ಗುಣಗಳು ಅವರನ್ನು ಗೌರವಿಸಿ.

ಪ್ರಪಂಚದಲ್ಲಿ ಎಲ್ಲವೂ ಸುಂದರ ಕೆಟ್ಟದ್ದರಿಂದ ದೂರ ಇದ್ದಾಗ ಪ್ರಪಂಚವೇ ಸುಂದರ.  ಈ ಸುಂದರ ಪ್ರಪಂಚದಲ್ಲಿ ಕೆಟ್ಟದ್ದರಿಂದ ಹಾನಿಗೆ ಒಳಗಾಗುತ್ತಲಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮನೆಯನ್ನು ಸುಂದರವಾಗಿಟ್ಟು ಕೊಳ್ಳೋಣ. ರೋಗ ರುಜಿನಗಳಿಂದ ದೂರವಿರೋಣ. ಆನಂದವಾಗಿರೋಣ

ಮಾಧುರಿ

ಹೊಟ್ಟೆ ಉರಿ (ಜಲಸಿ)



ಏನಿದು ಹೊಟ್ಟೆ ಉರಿ? ಯಾಕೆ ಬರತ್ತೆ? ಯಾರಿಗೆ ಬರತ್ತೆ? ಹೊಟ್ಟೆ ಉರಿ ಬರಲಿಕ್ಕೆ ಮುಖ್ಯ ಕಾರಣ ಅಂದರೆ ನಮ್ಮ ಮನಸ್ಸಿನಲ್ಲಿರುವ ಅಸಮಾಧಾನ ಅಥವಾ ನಾವು ಇಷ್ಟ ಪಟ್ಟ ವಸ್ತು/ವ್ಯಕ್ತಿ ನಮ್ಮೊಂದಿಗೆ ಇಲ್ಲ/ ಬೇರೆಯವರ ಬಳಿ ನಮಗೆ ಬೇಕಾದ್ದು ಇದೆ ನಮ್ಮಲ್ಲಿ ಇಲ್ಲ ಇದೆ ರೀತಿ ಅನೇಕ ಕಾರಣಗಳು ಇರಬಹುದು.

ಈ ರೀತಿಯ ಹೊಟ್ಟೆಯುರಿ ಈಗೀನ ಕಾಲದ್ದೇನಲ್ಲ ಹಿಂದಿನ ಕಾಲದಿಂದಲೂ ಬೆಳೆದು ಬಂದಿದ್ದು ದೇವಾದಿ ದೇವತೆಗಳಿಗೂ ಹೊಟ್ಟೆಯುರಿ ಇತ್ತು. ಮನುಷ್ಯ/ದೇವ/ದಾನವ ಯಾರೇ ಇರಲಿ ಚಂದ ಇರುವ ವಸ್ತು/ವ್ಯಕ್ತ ಅಥವಾ ಮನಸ್ಸಿನ ಹಿಡಿಸಿದ ವ್ಯಕ್ತಿ/ವಸ್ತು ನಮ್ಮನ್ನು ಬಿಟ್ಟು ಬೇರೆ ಯಾರದ್ದೂ ಆಗಬಾರದೆಂಬ ಭಾವನೆ ಹೊಟ್ಟೆಯುರಿಯ ಮೂಲ. ಈ ಹೊಟ್ಟೆಯುರಿಯ ಮೂಲವೇ ಸ್ವಾರ್ಥ.

ದೇವತೆಗಳ ಸಂಪತ್ತನ್ನು ನೋಡಿ ಹೊಟ್ಟೆಯುರಿಯಿಂದ ರಾಕ್ಷಸರು ಒದ್ದಾಡಿದ್ದಾರೆ, ಕೌಸಲ್ಯೆಯ ಮಗ ರಾಜನಾದರೆ ಎಂಬ ಹೊಟ್ಟೆಯುರಿಯಿಂದ ಕೈಕೇಯಿ ರಾಮಾಯಣಕ್ಕೆ ಕಾರಣವಾದಳು, ಕುಂತಿಗೆ ಮಕ್ಕಳಾದ ತನಗೆ ಮಕ್ಕಳಾಗಿಲ್ಲವೆಂದು ಗರ್ಭವನ್ನು ಒಡೆದುಕೊಂಡು ಗಾಂಧಾರಿಯು ಮಹಾಭಾರತದ ಯುದ್ಧದ ಕಾರಣಕರ್ತರಲ್ಲಿ ಒಬ್ಬಳಾದಳು ಓ ಹಾಗಾದರೇ ಹೆಣ್ಣು ಮಕ್ಕಳಿಗೆ ಹೊಟ್ಟಯುರಿ ಅನ್ನಬೇಡಿ ಗಂಡಸರೇನು ಕಡಿಮೆ ಇಲ್ಲ. ದುರ್ಯೋಧನ, ಕರ್ಣ ಹೀಗೆ ಹೆಸರುಗಳು ಸೇರುತ್ತಾ ಹೋಗುತ್ತದೆ.

ಈ ಹೊಟ್ಟೆಯುರಿಯನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬ ಮಾತು ಬಂದರೆ. ನಮ್ಮ ಯೋಗ್ಯತೆ ಅರಿತು ಕೊಂಡು ನಮಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು. ನನ್ನಮ್ಮ ಹೇಳುತ್ತಿದ್ದಳು. ಬೇರೆಯವರ ಎಲೆಯಲ್ಲಿ ಏನಿದೆ ಅಂತ ನೋಡಬೇಡ ನಮ್ಮ ಎಲೆಯಲ್ಲಿ ಹಾಕಿದ್ದನ್ನು ತಿಂದು ತೃಪ್ತಿಯಿಂದ ಇರು ಅಂತ. ನಮ್ಮ ಹಳೆಯ ಕಾಲದ ಕತೆಗಳಲ್ಲಿ, ಪುರಾಣಗಳಲ್ಲಿ ಜನಸಂಪದದಲ್ಲಿ ಬಹಳಷ್ಟು ಉದಾಹರಣೆಗಳಿವೆ ಹೊಟ್ಟೆಯುರಿ ಹೊಂದಿದವರು ಬಹಳ ಕಾಲ ಸುಖವಾಗಿ ಇದ್ದಾರೆಂಬ ಉದಾಹರಣೆ ಇಲ್ಲ. ಇದ್ದುದರಲ್ಲಿ ತೃಪ್ತಿಯಿಂದ ಇರುವುದೇ ಜೀವನ.

ದಯವಿಟ್ಟು ಯಾರನ್ನೂ ಯಾರಿಗೂ ಹೋಲಿಕೆ ಮಾಡಿಕೊಳ್ಳಬೇಡಿ ಎಲ್ಲರಿಗೂ ಅವರದ್ದೇ ಆದ ಸ್ವಂತಿಕೆ ಇರುತ್ತದೆ. ಎಲ್ಲರೂ ಒಂದೊಂದು ವಿಧದಲ್ಲಿ ವಿಶೇಷವಾಗಿಯೇ ಇರುತ್ತಾರೆ. ಜೀವನ ಬಂದ ಹಾಗೆ ಸ್ವೀಕರಿಸಿದಾಗ ಸುಲಭವಾಗುತ್ತದೆ. ನಮ್ಮದಲ್ಲದ ವಸ್ತುವೇ ಆಗಿರಲಿ ವ್ಯಕ್ತಿಯೇ ಆಗಿರಲಿ ಸಿಗಲು ಸಾಧ್ಯವಿಲ್ಲ. ನಮ್ಮ ಬಳಿ ಇದ್ದನ್ನು ಪ್ರೀತಿಸಬೇಕು ಸಂತೋಷದಿಂದ ಇರಬೇಕು. ನಿಲುಕದ ದ್ರಾಕ್ಷಿ ಹುಳಿಯಾಗಿರುವುದಿಲ್ಲ ಅದು ನಮಗೆ ಲಭ್ಯವಿರುವುದಿಲ್ಲ ಅಷ್ಟೆ.  ಹುಲಿಯ ರೀತಿ ಆಗುತ್ತೇನೆಂದು ನರಿ ಮೈ ಸುಟ್ಟು ಗಾಯ ಮಾಡಿಕೊಂಡರೆ ನರಿ ಹುಲಿಯಾಗಲು ಸಾಧ್ಯವೇ? ಜೀವನದ ದೊಡ್ಡ ಪಾಠ ಹಾಸಿಗೆ ಇದ್ದಷ್ಟು ಕಾಲು ಚಾಚು, ಪರರ ಸ್ವತ್ತಿಗೆ ಕಣ್ಣು ಹಾಕಬೇಡ.

ಇದೇನಪ್ಪ ಭಾಷಣ ಮಾಡ್ತಿದ್ದಾಳೆ ಅಂದುಕೊಳ್ಳಬೇಡಿ. ಎಲ್ಲ ಲೇಖನಕ್ಕೂ ಪ್ರೇರಣೆ ಇದ್ದೇ ಇರುತ್ತದೆ. ಹೀಗೆ ಮುಂಜಾನೆ ಪ್ರೇರಣೆ ದೊರಕಿತು. ಬರೆಯಬೇಕಾಗಿ ಬಂತು.  ಈಗಂತೂ ಲಾಕ್‌ ಡೌನ್‌ ಯಾರೋ ಹೊರಗೆ ಹೋಗಿ ಬಂದ್ರ ನಾವು ಹೋಗಿಲ್ಲ, ಅವ್ರ ಮನೇಲಿ ಆರೀತಿ ಆಹಾರ ಮಾಡಿದ್ರೂ ನಾವು ತಿಂದಿಲ್ಲ ಇಂತಹ ಕ್ಷಲ್ಲಕ ಕಾರಣಗಳು ಹೊಟ್ಟೆಯುರಿಗೆ ಕಾರಣ ಇದು ದೊಡ್ಡದಾದಾಗ ಹಾನಿ ಹೊಟ್ಟೆಯುರಿ ಪಟ್ಟವರಿಗೇ ಅಲ್ಲವೇ?

ಮನೆಯಲ್ಲಿಯೇ ಇರಿ, ಆರೋಗ್ಯಕರ ಊಟ ಮಾಡಿ, ಉತ್ತಮ ವಿಚಾರ ಓದಿ ನೋಡಿ, ನಿಮ್ಮ ವ್ಯಕ್ತಿತ್ವವನ್ನು ಕೀಳುಮಟ್ಟಕ್ಕೆ ತೆಗೆದುಕೊಂಡು ಹೋಗದಿರಿ. ಇರುವುದರಲ್ಲೇ ಆನಂದದಿಂದ ಇರುವುದೇ ಜೀವನ

ಮಾಧುರಿ

Saturday, April 25, 2020

ಅಸುರಕ್ಷಿತತೆ‌ಯ ಭಾವನೆ (ಇನ್‌ ಸೆಕ್ಯೂರಡ್‌ ಫೀಲಿಂಗ್)



ಅಸುರಕ್ಷತತೆಯ ಭಾವನೆ ಯಾರಿಗೆ ಯಾಕೆ ಹೇಗೆ ಬರುತ್ತದೆ ಎಂದು ಯೋಚಿಸುವಾಗ ಬಹಳ ವಿಚಾರಗಳು ಚರ್ಚೆಗೆ ಬರುತ್ತದೆ.  ಅಸುರಕ್ಷತತೆಯ ಭಾವ ಯಾರಿಗೆ ಅಂದರೆ ಯಾವ ಯಾವ ವಯಸ್ಸಿನ ಜನರಲ್ಲಿ ನೋಡ ಬಹುದು ಎಂದು ಯೋಚಿಸುವಾಗ ಸಣ್ಣ ಮಗುವಿನಿಂದ ಹಿಡಿದು ಇಂದೋ ನಾಳೆಯೋ ಸಾಯುವ ಮುದುಕರವರಿಗೂ ಕಾಡುತ್ತದೆ. ಯಾಕೆ ಕಾಡುತ್ತದೆ ಎಂದು ಪ್ರಶ್ನೆ ಮಾಡಿಕೊಂಡಾಗ ಹಲವು ಕಾರಣಗಳಿರಬಹುದು ಅಶಕ್ತತೆ, ಆತ್ಮಬಲದ ಕೊರತೆ, ಅಸಹಾಯಕತೆ, ಗಾಬರಿ ಹೀಗೆ ಅನೇಕ ಮನಸ್ಸಿನ ಭಾವನೆಗಳು ಬರುತ್ತವೆ.  ಹೇಗೆ ಬರುತ್ತದೆ ಎಂದಾಗ ಪರಿಸ್ಥಿತಿಯ ಕಾರಣಗಳಿಂದ ಭಾವನೆಗಳ ಒತ್ತಡದಿಂದ ಉಂಟಾಗುತ್ತದೆ.

ಇಂದು ಈ ಅಸುರಕ್ಷತೆಯ ಭಾವನೆಯ ಬಗೆಗೆ ಯಾಕೆ ಮಾತು ಎಂದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲರ ಮನದಲ್ಲೂ ಅಸುರಕ್ಷತೆಯ ಭಾವನೆ ಒಂದು ಕ್ಷಣವಾದರೂ ಬಂದು ಹೋಗಿರದೇ ಇರಲಾರದು.  ಸಣ್ಣ ಮಕ್ಕಳಿಗೆ ಅಮ್ಮ ಜೊತೆಯಲ್ಲಿ ಇಲ್ಲದೇ ಹೋದಾಗ ಅವಳು ಎಲ್ಲಿ ಬಿಟ್ಟು ಹೋಗುವಳೋ ಎಂಬ ಭಯ, ಶಾಲೆಗೆ ಹೋಗುವಾಗ ಸ್ನೇಹಿತರು ಜೊತೆಗೆ ಆಡದೇ ಹೋದರೆ, ಅಧ್ಯಾಪಕರು ಕೊಟ್ಟ ಕೆಲಸ ಮಾಡದಾಗ ಬಯ್ಯುವರೆಂಬ ಅಂಜಿಕೆ, ಓದು ಮುಗಿದ ನಂತರ ಕೆಲಸದ ಚಿಂತೆ ಕೆಲಸ ಆದ ಮೇಲೆ ಮದುವೆ ಹೀಗೆ ಸಾಯುವವರೆಗೂ ಚಿಂತೆಗಳ ಸರಮಾಲೆಯು ನಡೆದೇ ಇರುತ್ತದೆ.

ಇಂದಿನ ದಿನದ ಚಿಂತೆ ಭಯವೆಂದರೆ ನಾಳೆ ಏನು? ಬದುಕುತ್ತಿವೋ ಇರುವುದಿಲ್ಲವೋ ಎಂಬ ಭಯ.  ಈ ದಿನದ ಪರಿಸ್ಥಿತಿಗೆ ಅದು ಸಹಜ ಏಕೆಂದರೆ ಅಸುರಕ್ಷತೆ ಎಲ್ಲ ಕಡೆಯೂ ತಾಂಡವವಾಡುತತಿದೆ. ಬಹಳ ದಿನ ಮನೆಯಿಂದ ಹೊರ ಬರಲೇ ಹೆದರುವ ಸಂದರ್ಭ ಬಂದಿರುವದರಿಂದ ಎಲ್ಲರೂ ಭಯಭೀತರಾಗಿದ್ದಾರೆ.

ಈ ಅಸುರಕ್ಷತೆಯ ಭಾವನೆಯಿಂದ ಹೊರಬರಲು ನಾವು ಅನುಸರಿಸಬೇಕಾದ ಮಾರ್ಗವೆಂದರೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಲಿ, ನಮ್ಮನ್ನು ಜೀವಂತ ಇಟ್ಟಿರುವ ಭಗವಂತನ ಮೇಲೆ ನಂಬಿಕೆ ಇರಲಿ. ಜೊತೆಗೆ ಇರುವವರ ಬಗೆಗೂ ನಂಬಿಕೆ ಇರಲಿ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರಲ್ಲೂ ಅಸ್ಥಿರತೆಯ ಭಾವನೆ ಇದ್ದೇ ಇದೆ ಹಾಗೆಂದು ಎಲ್ಲರ ಮೇಲೆ ಅನುಮಾನ ಸಲ್ಲದು, ಎಲ್ಲಕ್ಕೂ ಮೊದಲು ನಮ್ಮನ್ನು ಇಷ್ಟು ದಿನ ಕಾಪಾಡಿದ ಭಗವಂತನ ಮೇಲೆ ಶ್ರದ್ಧೆ ಇರಲಿ ಅವನು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಇರಲಿ. ಮನಸ್ಸು ಒಂದು ಮರ್ಕಟದಂತೆ ಇಲ್ಲ ಸಲ್ಲದ ಅನುಮಾನಗಳು ಗಾಳಿ ಮಾತಿಗೆ ಕಿವಿಗೊಡದೇ, ನಾವು ಅನುಸರಿಸಬೇಕಾದ ಎಲ್ಲ ಮುಂಜಾಗ್ರತಾ ಕ್ರಮವನ್ನು ಅನುಸರಿಸೋಣ. ಮಾಸ್ಕ್‌ ಧರಿಸಿ ಹೊರಗೆ ಹೋಗೋಣ, ದಿನದಲ್ಲಿ ನಾಲ್ಕಾರು ಬಾರಿ ಕೈ ತೆಳೆದು ಶುದ್ಧವಾಗಿರೋಣ. ಸ್ವಚ್ಛತೆ ನಮದಷ್ಟೆ ಅಲ್ಲ ಪರಿಸರವನ್ನು ಸ್ವಚ್ಛವಾಗಿಡೋಣ.

ಕೆಲವೊಂದು ಹೇಡಿಗಳು ಆತ್ಮಹತ್ಯೆ ಅಥವಾ ಬೇರೆ ಯಾವುದೇ ರೀತಿಯ ಜೀವ ಹಾನಿ, ಮಾನಸಿಕ ಸ್ಥಿಮೀತ ಕಳೆದೊಂಡು ಒದ್ದಾಡುವದನನು ಬಿಟ್ಟು, ಸಕಾರತ್ಮಕ ಭಾವನೆಗಳನ್ನು ಜಾಗೃತಗೊಳಿಸೋಣ. ಏಲ್ಲ ಸಂದರ್ಭದಲ್ಲೂ ಆಸೆಯೇ ದುಃಖಕ್ಕೆ ಕಾರಣವಲ್ಲ, ಆದರೆ ಆಶಾ ಭಾವನೆಯೇ ಸದಾ ಕಾಲ ಉತ್ಸಾಹಕ್ಕೆ ಕಾರಣ ಜೀವನಕ್ಕೆ ಕಾರಣ ಎನ್ನಬಹುದು. 

ಮನೆಯಲ್ಲಿಯೇ ಇರಿ, ಧೈರ್ಯದಿಂದ ಇರಿ, ಸುರಕ್ಷತೆಯಿಂದ ಸುರಕ್ಷಿತವಾಗಿರಿ

ಮಾಧುರಿ

ಅಭಿವ್ಯಕ್ತಿ ಸ್ವಾತಂತ್ರ್ಯ



ಏನಪ್ಪಾ ವಿವಾದಿತ ವಿಷಯಕ್ಕೆ ಕೈ ಹಾಕಿದಳು ಅಂದುಕೊಳ್ಳುತ್ತಿರಬಹುದು.  ಅನಾದಿ ಕಾಲದಿಂದಲೂ ಸಮಾಜದ ಕಟ್ಟಕಡೆಯ ಜೀವಿಗೆ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆಯನ್ನು ಎದುರಿಸಿರುವ ಸಾಧ್ಯತೆ ಬಹಳ ಇದೆ. ಕೆಲವು ಹೇಳಿಕೊಳ್ಳಬಹುದು ಇನ್ನು ಕೆಲವು ಹೇಳಲಾಗದು.  ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸಣ್ಣ ಮಕ್ಕಳಿಗೆ, ರಾಜನ ಆಸ್ಥಾನದಲ್ಲಿ ಕೆಲಸ ಮಾಡುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇರಲಿಲ್ಲ. ಆಧುನಿಕ ಭಾರತದಲ್ಲಿ ಸಾಂವಿಧಾನಿಕವಾಗಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಆದರೂ ಕೆಲವು ಜನರಿಗೆ ತಮ್ಮ ಅಭಿಪ್ಯಾಯ ವ್ಯಕ್ತ ಪಡಿಸುವುದು ಕಿರಿಕಿರಿ ಎನಿಸುತ್ತದೆ. ನಾನು ರಾಜಕೀಯ ಅಥವಾ ಪತ್ರಿಕೋದ್ಯಮದ ಬಗೆಗೆ ಹೇಳಲು ಹೊರಟಿಲ್ಲ.  ಮನೆಯಲ್ಲಿ ದೊಡ್ಡವರ ಅಭಿಪ್ರಾಯಕ್ಕೆ ಬದಲಾಗಿ ನಾವು ಮಾತನಾಡಿದರೆ ಅವರು ಇಷ್ಟ ಪಡುವುದಿಲ್ಲ, ಆ ವಿಷಯವನ್ನು ಬಿಟ್ಟು ಬೇರೆ ವಿಷಯದಲ್ಲಿ ಬೈಯ್ಯುತ್ತಾರೆ. ನಮ್ಮ ಸಂಬಂಧಿಕರು ಯಾವುದೋ ರೀತಿಯಲ್ಲಿ ಸಹಾಯ ಮಾಡಿರುತ್ತಾರೆ ಅವರ ಅಭಿಪ್ರಾಯಕ್ಕೆ ನಾವು ಸಮರ್ಥನೆ ಮಾಡದೇ ಹೋದಾಗ ಅವರೂ ಕೂಡ ನಮ್ಮ ಬಗ್ಗೆ ಅನೇಕ ರೀತಿಯ ಅಸಮಾಧಾನ ವ್ಯಕ್ತ ಪಡಿಸುತ್ತಾರೆ.  ಶಾಲಾ ಕಾಲೇಜಿಗಳಲ್ಲಿ ಅಧ್ಯಾಪಕರ ಯಾವುದೇ ಅಭಿಪ್ರಾಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬಂದಲ್ಲಿ ಕೆಲವು ಕಡೆ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಈ ರೀತಿಯ ಅಸಮಾಧಾನ ಹೇರಿಕೆ ನಮ್ಮ ಮತ್ತು ಸಮಾಜದ ಆರೋಗ್ಯ ಕೆಡಿಸುತ್ತದೆ. ಆದ್ದರಿಂದ ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋಣ ಆದರೆ ದಬ್ಬಾಳಿಕೆಗೆ ಒಳಗಾಗುವುದು ಬೇಡ. ಜೀವನಕ್ಕೆ ಎರಡೇ ಮಾರ್ಗವಿರುವುದಿಲ್ಲ. ಮೂರನೆಯದಾದ ಒಂದು ಮಾರ್ಗವಿರುತ್ತದೆ. ತಟಸ್ಥ ಮಾರ್ಗ ಅವರನ್ನು ಅಸಮಾಧಾನ ಪಡಿಸುವುದು ಬೇಡ ನಾವು ಹೇರಿಕೆ ಮಾಡಿಕೊಳ್ಳುವುದು ಬೇಡ. ಅನಿವಾರ್ಯತೆ ಬಂದಾಗ ವಿರೋಧ ಮಾಡಲೇ ಬೇಕು. ಆದರೂ ಎಲ್ಲ ಪರಿಸ್ಥಿತಿ ಅಥವಾ ಸಮಸ್ಯೆಯಲ್ಲಿ ಮೂರನೆಯ ಮಾರ್ಗ ಶಾಂತಿಯ ಮಾರ್ಗ ತಟಸ್ಥ ಮಾರ್ಗ ಸದಾ ಇದ್ದೇ ಇರುತ್ತದೆ. ಸಮಸ್ಯೆ ಎದುರಿಸುವಾಗ ಪರಿಹಾರ ಮುಖ್ಯವಾದುದು. ದಬ್ಬಾಳಿಕೆಯಾದಾಗ ಹೋರಾಡಬೇಕು ನಿರ್ಲಕ್ಷ್ಯ ಮಾಡುವ ಸಮಯದಲ್ಲಿ ನಿರ್ಲಕ್ಷಿಸಬೇಕು.

ನಾವು ಭಾರತೀಯರು ಶಾಂತಿ ಪ್ರಿಯರು, ತಟಸ್ಥರಾಗಿ ಇರೋಣ. ನಮ್ಮತನಕ್ಕೆ ನಮ್ಮ ಸಂಸ್ಕೃತಿಗೆ ಸಂಸ್ಕಾರಕ್ಕೆ ಧಕ್ಕೆ ಬಂದಾಗ ಕಾರ್ಯ ಪ್ರವರ್ತರಾಗೋಣ. ಸಧ್ಯದ ಪರಿಸ್ಥಿತಿಯ ಸಮಸ್ಯೆ ಕೋರೋನಾ. ಮನೆಯಲ್ಲಿಯೇ ಇರಿ, ಕ್ಷೇಮವಾಗಿರಿ, ಆಯುಷ್ಯವನ್ನು ವೃದ್ಧಿಸಿಕೊಳ್ಳಿರಿ.

ಮಾಧುರಿ

ವಿಶ್ವ ಪುಸ್ತಕದಿನ



ಇಂದು ಏಪ್ರಿಲ್‌ 23 ವಿಶ್ವ ಪುಸ್ತಕದಿನ.  ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ನಾವು ಸಣ್ಣವರಿದ್ದಾಗ ಅನಿವಾರ್ಯವಾಗಿ ಪಠ್ಯ ಪುಸ್ತಕಗಳನ್ನು ಓದುತ್ತೇವೆ.  ಓದುವುದು ಹವ್ಯಾಸವಾಗಿ ಬೆಳೆದಾಗ ಪುಸ್ತಕಕ್ಕಿಂತ ದೊಡ್ಡ ಮಿತ್ರ ಬೇರೆ ಯಾವುದೂ ಇಲ್ಲ.  ನಮ್ಮ ದೇಶದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುಸ್ತಕಗಳು ಪ್ರಾಚೀನ ಕಾಲದಲ್ಲೂ ಪ್ರಚಲಿತವಿದ್ದವು.  ತಾಳೆಗರಿಯ ಪುಸ್ತಕ, ತಗಡಿನಲ್ಲಿ ಕೆತ್ತನೆ ಹೀಗೆ ಅನೇಕ ಪುಸ್ತಕಗಳು ಹಸ್ತ ಪ್ರತಿಯಲ್ಲಿ ನಮಗೆ ಲಭ್ಯವಿದೆ.

ವಿಜ್ಞಾನದ ವಿಕಾಸವಾದಂತೆ ಮುದ್ರಣಾಲಯದಲ್ಲಿ ಕಾಗದದ ಮೇಲೆ ಮುದ್ರಣ ಪ್ರಾರಂಭವಾದಾಗ ಪುಸ್ತಕಗಳಿಗೆ ಸಾಹಿತಿಗಳಿಗೆ ಬಹಳಷ್ಟು ಬೇಡಿಕೆ ಆರಂಭವಾಯಿತು ಬ್ರಿಟಿಷರ ಕಾಲದಲ್ಲಿ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಮತ್ತು ಸಂಸ್ಕೃತಿ, ಇತಿಹಾಸ ಎಲ್ಲ ಬಗೆಯ ವಿಚಾರಗಳ ಬಗೆಗೆ ಪುಸ್ತಕಗಳು ಪ್ರಕಟವಾಗಲು ಪ್ರಾರಂಭವಾಯಿತು.  ಲೇಖಕರಿಗೆ ಸಿಗುವ ಹಣವೆಷ್ಟೋ ತಿಳಿದಿಲ್ಲ ಆದರೆ ಪುಸ್ತಕಗಳು ಸಾರ್ವಕಾಲಿಕವಾಗಿ ಜ್ಞಾನದ ಭಂಡಾರಗಳು.

ಇಂದಿನ ದಿನದಲ್ಲಿ ಪುಸ್ತಕಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪುಸ್ತಕಗಳ ಕಾಲ ಬಂದಿಗೆ ಅಂತರ್ಜಾಲದಲ್ಲಿ ತಮ್ಮ ಪುಸ್ತಕಗಳನ್ನು ಕೆಲವರು ಯಾವುದೇ ಶುಲ್ಕವಿಲ್ಲದೇ ಇನ್ನು ಕೆಲವರು ಸ್ವಲ್ಪ ಪ್ರಮಾಣದ ಶುಲ್ಕವನ್ನು ಪಡೆದು ಪುಸ್ತಕಗಳನ್ನು ಅನುಮತಿಸುತ್ತಾರೆ.  ತಾಳೆಗರಿಯ  ಕಾಲದಿಂದ ಹಿಡಿದು ಇಂದಿನ ಈ-ಪುಸ್ತಕದವರೆಗೂ ಪುಸ್ತಕಗಳು ಯಾವುದೇ ರೂಪದಲ್ಲಿ ಇರಲಿ. ಜ್ಞಾನದ ಭಂಡಾರ, ಮಾಹಿತಿಗಳ ಆಗರ, ಮನರಂಜನೆಯ ಸಾಧನವಾಗಿರುವುದು ಪುಸ್ತಕವೇ

ಬನ್ನಿ ಎಲ್ಲರೂ ಪುಸ್ತಕವನ್ನು ಓದೋಣ. ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಈ ಲಾಕ್‌ಡೌನ್‌ ಸಂದರ್ಭದಲ್ಲಿ  ಫೇಸ್‌ ಬುಕ್‌ ನಲ್ಲಿ ಮನೆಯಲ್ಲಿಯೇ ಕುಳಿತು ತಮ್ಮ ಸ್ನೇಹಿತರೊಂದಿಗೆ ಪುಸ್ತಕ ಓದುವ ಸವಾಲನ್ನು ಹಾಕಿದವರೂ ಇದ್ದಾರೆ. ಬೇರೇ ಯಾರದೋ ಸಲುವಾಗಿ ಅಲ್ಲ ನಮ್ಮ ಸಲುವಾಗಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕವನ್ನು ಓದೋಣ.

ಎಲ್ಲ ಮಿತ್ರರಿಗೂ ವಿಶ್ವ ಪುಸ್ತಕ ದಿನದ ಹಾರ್ದಿಕ ಶುಭಾಶಯಗಳು

ಮಾಧುರಿ

ಸಂಬಂಧಗಳು



ನಾವು ಹುಟ್ಟಿನಿಂದ ಬರುವ ಸಂಬಂಧಗಳು ಕೆಲವಾದರೆ, ನಾವು ಬೆಳೆಸಿಕೊಳ್ಳುವ ಸಂಬಂಧಗಳು ಇನ್ನು ಕೆಲವು. ಸಂಬಂಧ ಯಾವುದೇ ಇರಲಿ ಅವುಗಳಲ್ಲಿ ಪ್ರೀತಿ ವಿಶ್ವಾಸ ಬಹಳಮುಖ್ಯ.  ದೇವರು ಕೊಟ್ಟ ಸಂಬಂಧಗಳೆಂದರೆ ತಂದೆ-ತಾಯಿ, ರಕ್ತ ಸಂಬಂಧಿಗಳು, ಮದುವೆಯಾದ ನಂತರ ಬರುವುದು ನಾವು ಮಾಡಿಕೊಳ್ಳುವ ಸಂಬಂಧಗಳು ಬಂಧುಗಳು ಬಾಂಧವರು.

ಎಲ್ಲ ರೀತಿಯ ಸಂಬಂಧಗಳಿಗೂ ಅದರದೇ ಆದ ಮಹತ್ವವಿರುತ್ತದೆ. ಏಕೆಂದರೆ ಮನುಷ್ಯ ಸಮಾಜ ಜೀವಿ. ಮನೆಯಲ್ಲಿಯ ಜನರು ಬೇಸರ ಎಂದರೂ ಸ್ನೇಹಿತರಾದರೂ ಇದ್ದೆ ಇರುತ್ತಾರೆ. ಯಾವುದೇ ಜನರ ಸಹವಾಸ ಬೇಡವೆಂದು ಬದುಕುವ  ಗೂಬೆಯಂತೆ ಬದುಕುವ ಜನರು ನೂರಕ್ಕೆ 2-3 ಇರಬಹುದಷ್ಟೆ

ಸಾಮಾಜಿಕವಾಗಿ ಮನುಷ್ಯ ಸಂಗಜೀವಿ ಜನರ ಮಧ್ಯ, ಜನರೊಂದಿಗೇ ಇರುತ್ತಾನೆ, ಸಂಬಂಧಗಳನ್ನು ಬೆಳೆಸುತ್ತಾನೆ ಅವರ ಸಂಪರ್ಕದಿಂದ ಸಂತೋಷ ದುಃಖ ಅನೇಕ ಭಾವನೆಗಳನ್ನೂ ಜೀವಿಸುತ್ತಾನೆ.  ಆಧ್ಯಾತ್ಮಿಕವಾಗಿ ಸಂಬಂಧಗಳನ್ನು ವಿಶ್ಲೇಷಣೆ ಮಾಡಿದಾಗ  ಸಂಬಂಧ ಎಂದರೆ ಬಂಧನದ ಕಾರಣ ಮೋಹದ ಕಾರಣ ಎನ್ನಲಾಗುತ್ತದೆ. ಯಾವುದೇ ವ್ಯಕ್ತಿಯ ಸಂಪರ್ಕದಲ್ಲಿ ನಾವು ಬಂದಿದ್ದೇವೆಯೆಂದರೆ ಅವರಿಗೂ ನಮಗೂ ಋಣಾನುಬಂಧವಿರುತ್ತದೆ. ಹಿಂದಿನ ಜನ್ಮದ ಬಾಕಿಯನ್ನು ತೀರಿಸಲು ಅಥವಾ ಋಣವನ್ನು ಮಾಡಿದ ಉಪಕಾರವನ್ನು ಹಿಂಪಡೆಯಲು ಜೀವಿಸುತ್ತೇವೆ ಎನ್ನುತ್ತದೆ.

ರಾಮಾಯಣ ಸಂಬಂಧಗಳನ್ನು ಹೇಗೆ ನಿಭಾಯಿಸಬೇಕೆಂದು ಕಲಿಸಿದರೆ, ಮಹಾಭಾರತವು ಸಂಬಂದಗಳಲ್ಲಿ ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ಕಲಿಸುತ್ತವೆ. ಜೀವನದ ಪ್ರತಿ ಘಟ್ಟದಲ್ಲೂ ಸಂಬಂಧಗಳು ಸಂಬಂಧಿಕರು ಸ್ನೇಹಿತರು ಬಂದುಗಳ ಜೊತೆಯಲ್ಲಿಯೇ ಬದುಕುವ ನಾವು ಈಗೀಗ ಎಲ್ಲ ಸಂಬಂಧಗಳನ್ನು ಬಿಡುತ್ತಿದ್ದೇವೆಯೇ ಎಂಬ ಕಾಲ ಬಂದ ಹಾಗೆ ಆಗಿತ್ತು. ವೈಜ್ಞಾನಿಕತೆಯ ಹಾವಳಿಯಿಂದ ದೂರ ದೂರಾದ ಸಂಬಂಧಗಳು ಒಂದು ವೈರಾಣುವಿನಿಂದ ಹತ್ತಿರವಾಗುತ್ತಿವೆ. ಮೊದಲು ಮಾತನಾಡಲು ಜೊತೆ ಸಮಯ ಕಳೆಯಲು ಸಮಯವಿರಲಿಲ್ಲ, ಈಗ ಜೊತೆಗೆ ಇರುವುದೇ ಅನಿವಾರ್ಯತೆಯಾಗಿದೆ.

ಮನೆಯಲ್ಲಿಯೇ ಇರೋಣ, ಸುರಕ್ಷಿತವಾಗಿ ಇರೋಣ. ತಾಳ್ಮೆಯಿಂದ ಇರೋಣ ಪ್ರೀತಿಯಿಂದ ಇರೋಣ

ಮಾಧುರಿ

ಅಕ್ಷಯ ತೃತೀಯಾ



ಅಕ್ಷಯ ಅಂದರೆ ಕ್ಷಯವಾಗದ್ದು.  ಹಿಂದು ಧರ್ಮದ ಪ್ರಕಾರ ವೈಶಾಖ ಶುದ್ಧ ತೃತೀಯಾದಂದು ಅಕ್ಷಯ ತೃತೀಯಾ ಹಬ್ಬದ ಆಚರಣೆಯನ್ನು ಮಾಡುತ್ತೇವೆ. ಇಂದಿನ ದಿನ ಏನೇ ಕಾರ್ಯ ಮಾಡಿದರೂ ಶುಭದಾಯಕ ಮತ್ತು ವೃದ್ಧಿಸುತ್ತದೆ ಎಂಬುದು ಪ್ರತೀತಿ.  ಇಂದು ಯಾವ ಕೆಲಸ ಮಾಡಲು ಮುಹೂರ್ತವನ್ನು ನಕ್ಷತ್ರ ಪಂಚಾಗ ನೋಡುವ ಅವಶ್ಯಕತೆ ಇಲ್ಲಿ ಸಾಡೇ ತೀನಿ ಶುಭ ಮುಹೃತಗಳನ್ನು ಅಕ್ಷಯ ತೃತೀಯಾ ಕೂಡ ಒಂದು. 

ಇಂದು ಬಹಳಷ್ಟು ಮಹತ್ವದ ಘಟನೆಗಳು ಘಟಿಸಿದ ದಿನ ಪರಶುರಾಮ ಜಯಂತಿ, ಗಂಗೆಯು ಭೂಮಿಗೆ ಬಂದ ದಿನ, ಬಲರಾಮ ಜಯಂತಿ, ಶ್ರೀ ಕೃಷ್ಣ ಪರಮಾತ್ಮ ಪಾಂಡವರಿಗೆ ಅಕ್ಷಯ ಪಾತ್ರೆ ನೀಡಿದ ದಿನ ಮತ್ತು ಬಸವ ಜಯಂತಿ.  ಈ ದಿನ ಏನೇ ಕಾರ್ಯ ಮಾಡಿದರೂ ಅಕ್ಷಯವಾಗುತ್ತದೆ ಎಂಬ ಪ್ರತೀತಿ. ದೇವರಿಗೆ ಗಂಧ ಲೇಖನ ಮಾಡಿ ನಮ್ಮನ್ನು ತಂಪಾಗಿಡಲು ಪ್ರಾರ್ಥಿಸಲಾಗುತ್ತದೆ, ದೇವರಿಗೆ ಪಾನಕ ಕೋಸಂಬರಿ ಮಜ್ಜಿಗೆಯನ್ನು ಸಮರ್ಪಿಸಿ ವಾತಾವರಣದ ಬೇಗೆಯನ್ನು ತಡೆಯುವ ಶಕ್ತಿ ನೀಡೆಂದು ಬೇಡಿಕೊಂಡು ಇವುಗಳನ್ನು ನಮ್ಮ ಸುತ್ತಮುತ್ತಲಿನ ಜನರಲ್ಲಿ ಹಂಚಿ  ಅವರ ಹಾರೈಕೆಯನ್ನು ಪಡೆಯಲಾಗುತ್ತದೆ.  ಈ ದಿನ ವಸ್ತ್ರದಾನ, ಚಪ್ಪಲಿದಾನ, ಛತ್ರಿ ದಾನಗಳೂ ಮಹತ್ವದ್ದು. ನಮ್ಮ ಸಂಸ್ಕೃತಿಯಲ್ಲಿ ಬರುವ ಹಬ್ಬಗಳು ವೈಜ್ಞಾನಿಕ ಮತ್ತು ದಋಮಿಕ ಮಹತ್ವವನ್ನು ಆಯಾ ಕಾಲಗಳ ಅನುಗುಣವಾಗಿಯೇ ಇರುತ್ತವೆ.

ಬನ್ನಿ ಸ್ನೇಹಿತರೆ ಇಂದು ಎಲ್ಲರಲ್ಲಿ ಭಗವಂತನನ್ನು ಕಾಣೋಣ. ಪ್ರೀತಿಯಿಂದ ಇದ್ದು ಅಕ್ಷಯ ಪ್ರೀತಿಯನ್ನು ಪಡೆಯೋಣ, ಸುಮಧುರ ಮಾತುಗಳನ್ನಾಡಿ ಮಧುರವಾಗಿ ಇರೋಣ, ಸ್ನೇಹದಿಂದ ಇದ್ದು ಸ್ನೇಹಿತರನ್ನು ಅಕ್ಷಯವಾಗಿಸೋಣ, ಎಲ್ಲ ಜೀವಗಳಲ್ಲಿ ಮಮತೆಯನ್ನು ತೋರಿ ವಾತ್ಸಲ್ಯವಂತರಾಗೋಣ, ಬರುವ ಎಲ್ಲ ದುಷ್ಟ ಶಕ್ತಿಗಳೊಂದಿಗೆ ಹೋರಾಡಲು ಧೈರ್ಯವಂತರಾಗೋಣ. ನಮ್ಮ ಸದ್ಭುದ್ದಿಯಿಂದ ಧೀಮಂತರಾಗೋಣ, ಓಳೇಯ ಕೆಲಸಗಳನ್ನು ಮಾಡಿ ಮೇಧಾವಿಗಳೋಣ, ಸಮೃದ್ಧಿಯನ್ನು ಪಡೆಯಲು ಶ್ರಮ ಜೀವಿಗಳಾಗೋಣ.  ಅಭಿವೃದ್ದಿಯನ್ನು ಹೊಂದಲು ಪ್ರವ್ರತ್ತರಾಗೋಣ. 
ಎಲ್ಲರಿಗೂ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು

ಮಾಧುರಿ

Tuesday, April 14, 2020

ಜೀವನದಲ್ಲಿ ಆಹಾರ ಎಷ್ಟು ಮುಖ್ಯ ಎಷ್ಟು ಬಳಸ ಬೇಕು?

ಜೀವನದಲ್ಲಿ ಮನಷ್ಯ ಅಥವಾ ಯಾವುದೇ ಪ್ರಾಣಿ ಬದುಕಲು ಆಹಾರ ಬಹಳ ಮುಖ್ಯ. ಎಲ್ಲ ವಯಸ್ಸಿನವರಿಗೂ ಬೇರೆ ಬೇರೆ ರೀತಿಯ ಆಹಾರ ಸಮಯ ಸಮಯಕ್ಕೆ ಅವಶ್ಯಕತೆ ಇರುತ್ತದೆ. ಮಾನವ ಆದಿ ಕಾಲದಿಂದಲೂ ತಿನ್ನುವ ಪದಾರ್ಥಗಳನ್ನು ಬೆಳೆದು ಪ್ರಾಣಿಗಳನ್ನು ಹಿಡಿದು ಬೇಯಿಸಿ ಜೊತೆಗೆ ರುಚಿಕರವಾಗಿ ಮಾಡಿಕೊಂಡು ತಿನ್ನುವ ಕಲೆಯನ್ನು ಕಲಿತಿದ್ದಾನೆ.

ಪ್ರಸ್ತುತ ಕೋರೋನಾದಂತಹ ಮಹಾಮಾರಿ ಬಂದಿರುವ ಸಂದರ್ಭದಲ್ಲಿ ಲಾಕ್‌ಡೌನ್‌ ಆಗಿರುವ ಕಾರಣ ಎಲ್ಲರೂ ಮನೆಯಲ್ಲಿರುವುದರಿಂದ ಅನೇಕ ಬಗೆಬಗೆಯ ಪಕ್ವಾನ್ನಗಳನ್ನು ಮಾಡಿಕೊಂಡು ತಿನ್ನುತ್ತಾ ತಮ್ಮ ಸಮಯವನ್ನು ಬಹಳ ಸುಖಮಯವಾಗಿ ನಡೆಸುತ್ತಾ ಇರುವವರು ( ಒಂದು ವರ್ಗದ ಜನರು). ಇನ್ನು ಎಷ್ಟೋ ಜನರಿಗೆ ಸಮಯಕ್ಕೆ ತಿನ್ನಲು ಆಹಾರ ಇಲ್ಲದೇ ಹಸಿವಿನಿಂದ ಸಾಯುವ ಸಂದರ್ಭವು ಬಂದಿದೆ.  
ಮತ
ನನ್ನ ಸ್ನೇಹಿತರಲ್ಲಿ ಬಂಧುಗಳಲ್ಲಿ ಒಂದು ವಿನಂತಿ ನೀವು ಸಂತಸದಿಂದಿರಲಿ ದೇವರು ನಿಮಗೆ ಸದಾ ಸಮೃದ್ಧಿಯಾಗಿಯೇ ಇಟ್ಟಿರಲಿ. ದಯವಿಟ್ಟು ಬದುಕುವುದಕ್ಕಾಗಿ ತಿನ್ನಿರಿ, ತಿನ್ನುವುದಕ್ಕಾಗಿ ಬದುಕಬೇಡಿ.  ಯಾರಿಗೆ ತೊತ್ತು ಬೆಳೆಗಳು ಸರಿಯಾಗಿ ಬೆಳೆಯದೇ ನಾಳೆ ತಿನ್ನಲು ಆಹಾರ ಧಾನ್ಯಗಳೇ ಇಲ್ಲದೇ ಇರಬಹುದಾದ ಪ್ರಸಂಗ ಒದಗ ಬಹುದು. ಹಿತವಾಗಿ ಮಿತವಾಗಿ ಆರೋಗ್ಯಯುತವಾದ ಆಹಾರವನ್ನು ಸೇವಿಸಿರಿ. 

ಕೈಲಾದಷ್ಟು ಆಹಾರದೊರಯದಿರುವವರಿಗೆ ಸಹಾಯ ಮಾಡಿರಿ. ನಿಮ್ಮಲ್ಲಿ ಆಹಾರವನ್ನು ಹಾಳು ಮಾಡಬೇಡಿ. ಮಕ್ಕಳಿಗೆ ಆರೋಗ್ಯಕ್ಕೆ ಹಾನಿಯಾಗುವ ಪದಾರ್ಥಗಳನ್ನು ನೀಡಬೇಡಿ.  ಇದು ಸಂಭ್ರಮದ ಸಮಯವಲ್ಲ ಸಂಕಷ್ಟದ ಸಮಯ. ಜವಾಬ್ದಾರಿಯುತ ನಾಗರೀಕ ವರ್ತನೆ ಇರಲಿ.  ಮನೆಯಲ್ಲಿಯೇ ಇರೋಣ. ಆರೋಗ್ಯವಂತರಾಗಿರೋಣ